ಮೈಸೂರು: ಸಂವಿಧಾನ ರಚನೆ ವಿಚಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರವನ್ನು ಗೌಣ ಮಾಡಿ, ಕೈಪಿಡಿ ಸಿದ್ಧಪಡಿಸಿ ವಿವಾದಕ್ಕೆ ಕಾರಣವಾಗಿದ್ದ ಸ್ವಯಂಸೇವಾ ಸಂಸ್ಥೆ ಸಿಎಂಸಿಎ (ಚಿಲ್ಡ್ರನ್ಸ್ ಮೂವ್ಮೆಂಟ್ ಫಾರ್ ಸಿವಿಕ್ ಅವೇರ್ನೆಸ್) ಕ್ಷಮೆ ಯಾಚಿಸಿದೆ.
‘ಅಂಬೇಡ್ಕರ್ ಹಾಗೂ ಅವರ ವಿಚಾರಧಾರೆಗಳು ನಮ್ಮ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೂ ಪ್ರೇರಣೆಯಾಗಿದೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರವನ್ನು ಕಡಿಮೆಯಾಗಿ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ’ ಎಂದು ಶನಿವಾರ ಬಿಡುಗಡೆ ಮಾಡಿದ ಕ್ಷಮಾಪಣಾ ಪತ್ರದಲ್ಲಿ ಸಂಸ್ಥೆ ತಿಳಿಸಿದೆ.
‘ನಮ್ಮ ಉದ್ದೇಶಪೂರ್ವಕವಲ್ಲದ ಈ ತಪ್ಪಿನಿಂದ ಯಾವುದಾದರೂ ವ್ಯಕ್ತಿ, ಸಂಸ್ಥೆ ಅಥವಾ ಸಮುದಾಯದ ಭಾವನೆಗಳಿಗೆ ನೋವು ಉಂಟಾಗಿದ್ದಲ್ಲಿ, ಪ್ರಾಮಾಣಿಕವಾಗಿ ಮತ್ತು ಬೇಷರತ್ ಕ್ಷಮೆ ಯಾಚಿಸುತ್ತೇವೆ’ ಎಂದು ತಿಳಿಸಿದೆ.
ಕೈಪಿಡಿಯನ್ನು ಸಿಎಂಸಿಎ ಸಂಸ್ಥೆ ಸಿದ್ಧಪಡಿಸಿ ಇಲಾಖೆಗೆ ಕೊಟ್ಟಿತ್ತು. ಅದರಲ್ಲಿ, ‘ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚನೆ ಮಾಡಿಲ್ಲ’ ಎಂದು ಉಲ್ಲೇಖಿಸಲಾಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.