ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ಕೋವಿಡ್ಗೆ ಸಾವಿಗೀಡಾದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ 92 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 257 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4,320ಕ್ಕೆ ತಲುಪಿದೆ.ಕೇವಲ 48 ಗಂಟೆಗಳಲ್ಲಿ 524 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಗುರುವಾರ ವರದಿಯಾದ ಪ್ರಕರಣಗಳಲ್ಲಿ 155 ಮಂದಿ ಅನ್ಯರಾಜ್ಯಗಳಿಂದ ಬಂದವರಾಗಿದ್ದಾರೆ.
ಒಬ್ಬರು ಅಂತರರಾಷ್ಟ್ರೀಯ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ 2,312 ಮಂದಿ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.
ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಬೆಳಗಾವಿಯಲ್ಲಿ 12, ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 2, ಗದಗದಲ್ಲಿ 2 ಹಾಗೂ ವಿಜಯಪುರ, ಮೈಸೂರು, ಬಳ್ಳಾರಿ, ತುಮಕೂರು, ಹಾವೇರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಮಂಡ್ಯದಲ್ಲಿ 52 ಸೇರಿದಂತೆ 106 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಗದಗದಲ್ಲಿ ಶೀತಜ್ವರ ಮಾದರಿಯ ಅನಾರೋಗ್ಯದಿಂದ (ಐಎಲ್ಐ) ಬಳಲುತ್ತಿದ್ದ 44 ವರ್ಷದ ವ್ಯಕ್ತಿ ಜೂ.2ರಂದು ಮೃತಪಟ್ಟಿದ್ದರು.
ದಾವಣಗೆರೆಯಲ್ಲಿ 83 ವರ್ಷದ ವೃದ್ಧೆ, ಎದೆ ನೋವಿನಿಂದಾಗಿ ಮೇ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಮೂತ್ರಪಿಂಡ ವೈಫಲ್ಯದಿಂದ ಮರಣ ಹೊಂದಿದ್ದಾರೆ. ತೀವ್ರಉಸಿರಾಟದ ಸಮಸ್ಯೆ ಹೊಂದಿದ್ದ ಬೆಂಗಳೂರಿನ 65 ವರ್ಷದಮಹಿಳೆ ಜೂ.3ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದರು.
ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಬೆಂಗಳೂರಿನ 60 ವರ್ಷದ ಮಹಿಳೆ ಕೂಡ ಜೂ.3ರಂದು ಆಸ್ಪತ್ರೆಗೆ ದಾಖಲಾಗಿ, ಮರಣ ಹೊಂದಿದ್ದರು. ಕೋವಿಡ್ ಪರೀಕ್ಷೆ ವರದಿಯಿಂದ ಮೃತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರಿನಲ್ಲಿ 67 ವರ್ಷದವೃದ್ಧರೊಬ್ಬರು ಮೃತಪಟ್ಟಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಬುಧವಾರ ಖಚಿತಪಡಿಸಿದ್ದರು. ಆದರೆ, ಆರೋಗ್ಯ ಇಲಾಖೆ ಬುಲೆಟಿನ್ನಲ್ಲಿ ಈ ಮಾಹಿತಿ ಸೇರಿಲ್ಲ.ದಾವಣಗೆರೆಯಲ್ಲಿ ಖಾಸಗಿ ಆಸ್ಪತ್ರೆಯ 37 ಹಾಗೂ 35 ವರ್ಷದ ವೈದ್ಯರಿಗೆ ಸೋಂಕು ತಗುಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.