ಬೆಂಗಳೂರು:ಹೈಕೋರ್ಟ್ ಸೇರಿದಂತೆ ನಗರದ ಎಲ್ಲ ಕೋರ್ಟ್ ಗಳಲ್ಲಿ ಕಕ್ಷಿದಾರರಿಗೆ ತಮ್ಮ ವಕೀಲರಿಂದ ಪ್ರಮಾಣ ಪತ್ರ ಇದ್ದರೆ ಮಾತ್ರ ಒಳ ಪ್ರವೇಶಿಸಲು ಅವಕಾಶ ಎಂದು ನಿರ್ಬಂಧ ವಿಧಿಸಲಾಗಿದೆ.
ಈ ವಿಷಯವನ್ನು ಬುಧವಾರ ಪ್ರಕರಣವೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಸ್ವತಃ ತಿಳಿಸಿದರು.
"ಈ ಸಂಬಂಧ ಬುಧವಾರ ಮಧ್ಯಾಹ್ನ ಬೆಂಗಳೂರು ವಕೀಲರ ಸಂಘದ ಜೊತೆ ಚರ್ಚಿಸಲಾಗಿದೆ. ಇಂತಹ ಸನ್ನಿವೇಶದಲ್ಲೇ ನಿನ್ನೆ 14 ಸಾವಿರ ಜನರು ಬಂದು ಹೋಗಿದ್ದಾರೆ ಎಂಬುದು ಕಳವಳಕಾರಿ ವಿಚಾರ. ಹಾಗಾಗಿ ಕಕ್ಷಿದಾರರ ಹಾಜರಿ ಕಡ್ಡಾಯ ಎಂದಾದರೆ ಮಾತ್ರ ವಕೀಲರ ಪ್ರಮಾಣ ಪತ್ರ ತೋರಿಸಿ ಒಳ ಬರಬೇಕು" ಎಂದರು.
ಕೋರ್ಟ್ಗೆ ಬರುತ್ತಿರುವ ಅನೇಕ ಕಕ್ಷಿದಾರರಲ್ಲಿ ತಾಪಮಾನದ ಪ್ರಮಾಣ ನಿಗದಿಗಿಂತ ಹೆಚ್ಚಿದೆ. ಹೀಗಾಗಿ ಕಕ್ಷಿದಾರರು ಕೋರ್ಟ್ಗೆ ಭೇಟಿ ನೀಡುವುದನ್ನು ನಿಯಂತ್ರಿಸಬೇಕಿದೆ. ಆದರೆ ಸರ್ಕಾರಿ ಅಧಿಕಾರಿಗಳು, ಪೊಲೀಸರು ಮತ್ತು ಸರ್ಕಾರಿ ವಕೀಲರಿಗೆ ನಿರ್ಬಂಧವಿಲ್ಲ" ಎಂದು ಮೌಖಿಕವಾಗಿ ತಿಳಿಸಿದರು.