ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಒಂದು ವಾರದವರೆಗೆ ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ.
ರಾಜ್ಯದ ಐ.ಟಿ ವಲಯವು ಮಾನವಸಂಪನ್ಮೂಲದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ, ಸೋಂಕು ಹರಡುವ ಭೀತಿಯಿಂದಾಗಿ ಜನರು ಹೊರಬರಲು ಹೆದರುತ್ತಿದ್ದಾರೆ. ಇದರಿಂದಾಗಿ ನಿಗದಿಪಡಿಸಿದ ಅವಧಿಗೆ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿ ಯೋಜನೆಯಲ್ಲಿ ವಿಳಂಬ ಆಗುತ್ತಿರುವುದರಿಂದ ಚೀನಾದಲ್ಲಿರುವ ಐ.ಟಿ. ಕಂಪನಿಗಳು ಭಾರತವನ್ನು ಬಿಟ್ಟು ಮಲೇಷ್ಯಾ ಮತ್ತು ವಿಯೆಟ್ನಾಂನತ್ತ ಮುಖಮಾಡುತ್ತಿವೆ.
ರಾಜ್ಯದ ಬೊಕ್ಕಸಕ್ಕೆ ಜಿಎಸ್ಟಿ ಮತ್ತು ಮಾರಾಟ ತೆರಿಗೆ ವರಮಾನದಲ್ಲಿ ಕನಿಷ್ಠ ₹ 2 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಎಫ್ಕೆಸಿಸಿಐನ ತೆರಿಗೆ ತಜ್ಞ ಬಿ.ಟಿ. ಮನೋಹರ್ ಹೇಳಿದ್ದಾರೆ.
ತಯಾರಿಕಾ ವಲಯದ ಕಾರ್ಮಿಕರು ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಇದು ತಯಾರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಬಿಸಿಐಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರೈಕೆ ಮತ್ತು ಸರಕುಸಾಗಣೆ ಉದ್ಯಮ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ಇರುವ ಆಟೊಮೊಬೈಲ್ ಕಂಪನಿಗಳು ಬಿಡಿಭಾಗಗಳ ಪೂರೈಕೆ ಕೊರತೆ ಎದುರಿಸುತ್ತಿವೆ. ಜಪಾನ್, ಇಂಡೋನೇಷ್ಯಾ, ಥಾಯ್ಲೆಂಡ್ನಿಂದ ಪೂರೈಕೆ ಕಡಿಮೆಯಾಗಿದೆ.
ಸದ್ಯ, ಬೆಂಗಳೂರಿನಲ್ಲಿ 24 ಮಾಲ್ಗಳಿದ್ದು, ಅವುಗಳಲ್ಲಿ 21 ಸಿನಿಪ್ಲೆಕ್ಸ್ಗಳಿವೆ. ರಾಜ್ಯದಲ್ಲಿ 38 ಮಲ್ಟಿಪ್ಲೆಕ್ಸ್ಗಳು ಮತ್ತು 40 ಮಾಲ್ಗಳಿವೆ. ಇದಲ್ಲದೆ ರಾಜ್ಯದಲ್ಲಿ 600ಕ್ಕೂ ಅಧಿಕ ಚಿತ್ರಮಂದಿರಗಳಿವೆ. ಅಲ್ಪಾವಧಿಗೆ ಈ ಮಾಲ್ಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಮುಚ್ಚಿದರೆ ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸಲಿವೆ ಎಂದು ಆನಾರ್ಕ್ ರಿಟೇಲ್ ತಿಳಿಸಿದೆ.