ಬೆಂಗಳೂರು: ಏಪ್ರಿಲ್ 20ರ ಸಂಜೆ 5ರಿಂದ ಏಪ್ರಿಲ್ 21ರ ಮಧ್ಯಾಹ್ನ12ರ ವರೆಗೂ ರಾಜ್ಯದಲ್ಲಿ ಕೋವಿಡ್–19 ದೃಢಪಟ್ಟ 7 ಹೊಸ ಪ್ರಕರಣಗಳು ದಾಖಲಾಗಿವೆ. ವಿಜಯಪುರ, ಕಲಬುರ್ಗಿಯಲ್ಲಿ ತಲಾ 3 ಹಾಗೂ ದಕ್ಷಿಣ ಕನ್ನಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟು 415 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 280 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 114 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರ್ಗಿಯ ಮೂವರಲ್ಲಿ ಇಬ್ಬರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಬ್ಬರು ಮಾಹಿತಿ ಲಭ್ಯವಾಗಿಲ್ಲ. ವಿಜಯಪುರದ ಮೂವರು ರೋಗಿ–306ರ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಪತ್ತೆಯಾಗಿರುವ ಸೋಂಕಿತರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಬೆಳಗಿನ ಹೆಲ್ತ್ ಬುಲೆಟಿನಲ್ಲಿ ತಿಳಿಸಿದೆ.