ಬೆಂಗಳೂರು: ರಾಜ್ಯದಲ್ಲಿ ಮೇ 20ರ ಸಂಜೆ 5ರಿಂದ ಮೇ 21ರ ಸಂಜೆ 5ರ ವರೆಗೂ ಕೋವಿಡ್–19 ದೃಢಪಟ್ಟ 143ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,605ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 992ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸೋಂಕು ಪ್ರಕರಣಗಳ ಪೈಕಿ 41 ಮಂದಿ ಮೃತಪಟ್ಟಿದ್ದು, 571ಮಂದಿ ಗುಣಮುಖರಾಗಿದ್ದಾರೆ. ಇಂದು ಬಾಗಲಕೋಟೆಯ 6 ಮಂದಿ, ದಾವಣೆಗೆರೆಯ ಐವರು ಹಾಗೂ ದಕ್ಷಿಣ ಕನ್ನಡದ 3 ಮಂದಿ, ಮಂಡ್ಯದಲ್ಲಿ ಒಬ್ಬರುಸೇರಿದಂತೆ ಒಟ್ಟು 15ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಉತ್ತರ ಕನ್ನಡದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಶಿರಸಿಯಲ್ಲಿ ಒಮ್ಮೆಲೇ 7ಕೋವಿಡ್–19 ಪ್ರಕರಣಗಳು ದೃಢಪಟ್ಟಿರುವುದು ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದರೂ, ಶಿರಸಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿರಲಿಲ್ಲ.
ಉಡುಪಿ ಜಿಲ್ಲೆಯ 27 ಮಂದಿಯಲ್ಲಿ ಕೋವಿಡ್–19 ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಈಚೆಗೆ 199 ಮಂದಿಯ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರಲ್ಲಿ 27 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರಲ್ಲಿ ಇಬ್ಬರು ಕಾರವಾರದ ಕೋವಿಡ್ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ 33ಕೋವಿಡ್- 19 ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.
ಧಾರವಾಡ 5 ಜನರಿಗೆ, ಕಾರವಾರದಲ್ಲಿ 9 ಮಂದಿ, ಉಡುಪಿಯಲ್ಲಿ 25 ಮಂದಿ(+2 ಕಾರವಾರ) , ಬೆಂಗಳೂರಿನಲ್ಲಿ 6, ಹಾಸನದಲ್ಲಿ 13, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ6 ಹಾಗೂ ಬಳ್ಳಾರಿಯಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ.