ಕಲಬುರ್ಗಿ: ಕನ್ನಡಾಂಬೆಯನ್ನು ತಾಯಿ ಭಾರತಿಯ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರವನ್ನು ಸಹಿಸಲ ಆಗುವುದಿಲ್ಲ ಎಂದುಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದರು.
‘ರಾಜ್ಯದ ಹಿತಾಸಕ್ತಿಯ ವಿಷಯ ಬಂದಾಗ ಕನ್ನಡ ಮಾತೆಗೆ ಜೈ ಎನ್ನೋಣ. ದೇಶದ ವಿಚಾರಕ್ಕೆ ಬಂದಾಗ ಭಾರತ್ ಮಾತಾ ಕಿ ಜೈ ಎಂದು ಹೇಳಬೇಕು. ರಾಷ್ಟ್ರದ ವಿಚಾರದಲ್ಲಿ ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಒಂದಾಗಬೇಕು ಎಂಬ ಆಶಯ ಎಂ. ಗೋವಿಂದ ಪೈ ಹಾಗೂ ಕುವೆಂಪು ಅವರ ಬರಹಗಳಲ್ಲಿಯೂ ವ್ಯಕ್ತವಾಗಿದೆ’ ಎಂದರು.
‘ಇಂಗ್ಲಿಷ್ ವ್ಯಾಮೋಹ ಎಂಬುದು ಕೃಷ್ಣನನ್ನು ಮುಗಿಸಲು ಬಂದ ಪೂತನಿ ಇದ್ದಂತೆ. ಈ ವ್ಯಾಮೋಹಿ ಪೂತನಿಯನ್ನು ಕೊಲ್ಲುವುದಕ್ಕೆ ಒಬ್ಬರಿಂದ ಸಾಧ್ಯವಾಗದು. ಇದಕ್ಕೆ ಸಾಂಘಿಕ ಯತ್ನವನ್ನು ಮಾಡಬೇಕಿದೆ’ ಎಂದು ತಿಳಿಸಿದರು.
‘ಇಂಗ್ಲಿಷ್ ಅನ್ನ ಕೊಡುವ ಭಾಷೆ ಎಂಬಂತೆ ನಂಬಿಸಲಾಗುತ್ತಿದೆ. ನಿಜವಾಗಿಯೂ ಅನ್ನ ಕೊಡುವುದು ಭೂಮಿ ಹಾಗೂ ರೈತ. ಇಂಗ್ಲಿಷ್ ಇಲ್ಲದೆಯೂ ಜರ್ಮನ್, ಚೀನಾ, ರಷ್ಯಾದಲ್ಲಿ ಅಲ್ಲಿನ ಜನರಿಗೆ ಉದ್ಯೋಗ ದೊರಕಿದೆ. ಆರ್ಥಿಕತೆ ಬಲಗೊಂಡಿದೆ’ ಎಂದು ಸಚಿವ ರವಿ ಹೇಳಿದರು.
ಬೆಂಗಳೂರಲ್ಲೇ ಕನ್ನಡ ಹುಡುಕಬೇಕಿದೆ: ಕಾರಜೋಳ
‘ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರೇ ಹೆಚ್ಚಾಗಿದ್ದಾರೆ, ಬೇರೆ ಭಾಷೆಗಳೇ ಹೆಚ್ಚು ಬೆಳೆಯುತ್ತಿವೆ. ಇಂಗ್ಲಿಷ್ ವ್ಯಾಮೋಹದಿಂದ ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದ್ದು, ಕನ್ನಡವೂ ನಶಿಸುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.
ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಎಲ್ಲ ಶಾಸಕರು, ಸಚಿವರು, ಅಧಿಕಾರಿಗಳು, ಶಿಕ್ಷಕರು ಕಡ್ಡಾಯವಾಗಿ ಕನ್ನಡ ಬಳಸಬೇಕು. ಬೇರೆಯವರು ನಮ್ಮ ಜೊತೆ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನಾವು ಅವರಿಗೆ ಕನ್ನಡದಲ್ಲಿಯೇ ಉತ್ತರ ನೀಡಬೇಕು. ಇದರಿಂದ ಕನ್ನಡ ಗಟ್ಟಿಗೊಳ್ಳುತ್ತದೆ’ ಎಂದರು.