ಬೆಂಗಳೂರು: ನಗರದ ದಾಸರಹಳ್ಳಿ ಮೆಟ್ರೊ ನಿಲ್ದಾಣದ ಕಾನ್ಕೋರ್ಸ್ ಹಂತದಿಂದ ಜಿಗಿದು ಸಂದೀಪ್ (27) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿಯಾದ ಸಂದೀಪ್, ಕೇರಳದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ನಗರಕ್ಕೆ ಬಂದು ಪೋಷಕರ ಜೊತೆ ಉಳಿದುಕೊಂಡಿದ್ದರು.
‘ಪಾನಮತ್ತರಾಗಿ ಮಧ್ಯಾಹ್ನ 3.50ರ ಸುಮಾರಿಗೆ ದಾಸರಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಸಂದೀಪ್, ಸ್ವಚ್ಛತಾ ಕೆಲಸಗಾರರ ಕೊಠಡಿ ಬಳಿ ಹೋಗಿದ್ದರು. ಅಲ್ಲಿದ್ದ ಪ್ರಯಾಣಿಕರ ಜೊತೆ ಸುಖಾಸುಮ್ಮನೇ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು’ ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.
‘ಕೂಗಾಟ ಕೇಳಿ ಸ್ಥಳಕ್ಕೆ ಹೋಗಿದ್ದ ಭದ್ರತಾ ಸಿಬ್ಬಂದಿ, ಸಂದೀಪ್ ಅವರನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ತಪ್ಪಿಸಿಕೊಂಡು ಓಡಲಾರಂಭಿಸಿದ್ದ ಅವರುಕಾನ್ಕೋರ್ಸ್ ಹಂತದಿಂದ ಜಿಗಿದಿದ್ದರು’ ಎಂದು ವಿವರಿಸಿದರು.
‘ಘಟನೆಯಿಂದ ಸಂದೀಪ್ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿತ್ತು. ಪಾನಮತ್ತರಾಗಿದ್ದ ಅವರಿಗೆ ಅದರ ಅರಿವೇ ಇರಲಿಲ್ಲ. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗಲೂ ಮದ್ಯದ ಅಮಲಿನಲ್ಲೇ ಅವರು ಮಾತನಾಡುತ್ತಿದ್ದರು’ ಎಂದರು.
‘ಸ್ಥಳೀಯರ ಸಹಾಯದಿಂದ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಘಟನೆ ಹೇಗಾಯಿತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.