ಮಡಿಕೇರಿ: ನಗರದಲ್ಲಿ ಶನಿವಾರ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೇತೃತ್ವದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ, ಅಯೋಧ್ಯೆ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಿಸಬೇಕೆಂದು ಸಂಕಲ್ಪ ಮಾಡಲಾಯಿತು.ಎಲ್ಲರೂ ಈ ಸಂಕಲ್ಪಕ್ಕೆ ಬೆಂಬಲ ನೀಡಬೇಕು ಎಂದು ಗಣ್ಯರು ಕೋರಿದರು.
ಮಂಗಳೂರಿನ ಗುರುಪುರ ವಜ್ರದೇಹಿಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ‘ಸುಗ್ರೀವಾಜ್ಞೆ ತಂದಾದರೂ ಮಂದಿರ ನಿರ್ಮಿಸಬೇಕು.ಬಾಬರ್ ಮನಸ್ಥಿತಿ ತೊಲಗಿಸಿದರೆ ಮಾತ್ರ ಹಿಂದೂ ಸಮಾಜಕ್ಕೆ ಉಳಿಗಾಲ’ ಎಂದು ಎಚ್ಚರಿಸಿದರು.
‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂದಿರ ಪರವಾಗಿ ಎಂದೂ ಧ್ವನಿಯೆತ್ತಿಲ್ಲ. ಅದರ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಈಗ ಕೇಂದ್ರ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದು ದೂರಿದರು.
ಅದಕ್ಕೂ ಮೊದಲು ಬನ್ನಿಮಂಟಪದಿಂದ ಗಾಂಧಿ ಮೈದಾನದ ತನಕ ಬೃಹತ್ ಶೋಭಾಯಾತ್ರೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.