ಬೆಂಗಳೂರು: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಇದೇ 31ರವರೆಗೆ ರಜೆ ನೀಡಲಾಗಿದೆ, ಹೀಗಾಗಿ, ಈ ಅವಧಿಯಲ್ಲಿ ದಾಖಲಾತಿ ನಡೆಸಬಾರದು ಎಂದುಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು, ವಿದ್ಯಾರ್ಥಿಗಳು ಅಥವಾ ಪೋಷಕರು ಯಾವುದೇ ಕೆಲಸದ ನಿಮಿತ್ತ ಶಾಲೆಗಳತ್ತ ಬರಬಾರದು, ಸೂಚನೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅನೇಕ ಖಾಸಗಿ ಶಾಲೆಗಳು 2020-21ನೇ ಸಾಲಿನ ದಾಖಲಾತಿಯನ್ನು ಇದೇ31ರೊಳಗೆ ಶುಲ್ಕ ಪಾವತಿಸಿ ಮಾಡಿಕೊಳ್ಳಬೇಕು ಎಂದು ಪೋಷಕರಿಗೆ ಒತ್ತಾಯಿಸುತ್ತಿರುವ ದೂರುಗಳು ಬಂದಿವೆ. ಅಲ್ಲದೆ ಶಾಲೆಗಳಲ್ಲಿ ಜನಜಂಗುಳಿ ಉಂಟಾಗಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಆರ್ಟಿಇ ವೇಳಾಪಟ್ಟಿ ಮುಂದೂಡಿಕೆ: ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ವೇಳಾಪಟ್ಟಿ ಮತ್ತು ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇದೇ 31ರ ಬಳಿಕ ನೂತನ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದೂ ಆಯುಕ್ತರು ತಿಳಿಸಿದ್ದಾರೆ.