ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ್ ಇ.ಡಿ. ವಶಕ್ಕೆ: ನ್ಯಾಯಾಲಯದಲ್ಲಿನ ವಾದ–ಪ್ರತಿವಾದದ ಪೂರ್ಣ ಮಾಹಿತಿ

Last Updated 13 ಸೆಪ್ಟೆಂಬರ್ 2019, 13:24 IST
ಅಕ್ಷರ ಗಾತ್ರ

ಡಿ.ಕೆ.ಶಿವಕುಮಾರ್‌ಅವರ ಜಾಮೀನು ಅರ್ಜಿಹಾಗೂ ಇ.ಡಿ. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿವಿಚಾರಣೆ ನಡೆಸಿದವಿಶೇಷ ನ್ಯಾಯಾಲಯ ಶಿವಕುಮಾರ್ ಅವರನ್ನು ಸೆ.17ರ ವರೆಗೆ ಮತ್ತೆಇ.ಡಿ ವಶಕ್ಕೆ ನೀಡಿದೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸೋಮವಾರದ ಒಳಗೆ ಆಕ್ಷೇಪ ಸಲ್ಲಿಸುವಂತೆ ನ್ಯಾಯಾಲಯ ಇ.ಡಿ ಗೆ ಸೂಚಿಸಿದೆ.

6.00:ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ವಿಸ್ತರಣೆಯಾದ್ದರಿಂದ ಇ.ಡಿ. ಅಧಿಕಾರಿಗಳು ಶಿವಕುಮಾರ್‌ ಅವರನ್ನು ದೆಹಲಿಯ ತೊಘಲಕ್‌ ಠಾಣೆಗೆ ಕರೆದುಕೊಂಡು ಹೋದರು.

5.50:ಸೆ. 17ರ ವರೆಗೂ (ಮಂಗಳವಾರ)ಡಿ.ಕೆ.ಶಿವಕುಮಾರ್ ಅವರನ್ನುಇ.ಡಿ. ವಶಕ್ಕೆ‌ ನೀಡಿದ ನ್ಯಾಯಾಲಯ.

5.48:ಆರೋಗ್ಯಕ್ಕೆ ಮೊದಲ ಆದ್ಯತೆ‌ ನೀಡಿ ವಿಚಾರಣೆ ನಡೆಸುವಂತೆ ಇ.ಡಿ.ಗೆ ನ್ಯಾಯಾಲಯ ಸೂಚಿಸಿತು.

5. 45:ಸೋಮವಾರದೊಳಗೆ ಶಿವಕುಮಾರ್ ಜಾಮೀನು ಅರ್ಜಿಗೆಆಕ್ಷೇಪ ಸಲ್ಲಿಸುವಂತೆ ನ್ಯಾಯಾಲಯ ಇ.ಡಿ.ಗೆ ಸೂಚನೆ ನಿಡಿದೆ.

5.18:ಆದೇಶ ಕಾಯ್ದಿರಿಸಿ ಚೆಂಬರ್‌ಗೆ ನಡೆದ ನ್ಯಾಯಾಧೀಶರು

5.16:ಜಾಮೀನು ಅರ್ಜಿಗೆ ಸೋಮವಾರದ ಒಳಗೆ ಆಕ್ಷೇಪ ಸಲ್ಲಿಸಿ ಎಂದು ಇ.ಡಿ.ಗೆ ಸೂಚಿಸಿದ ನ್ಯಾಯಾಲಯ

5.13:ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನೂ ಪಡೆದ ನ್ಯಾಯಾಲಯ, ಇಂಜಕ್ಷನ್‌ ಚುಚ್ಚಿದ ಸೂಜಿಯಿಂದಾಗಿ ಕೈಯಲ್ಲಿ ರಕ್ತ ಬರುತ್ತಿದ್ದರೂ ಗಮನಿಸದೆ ಮತ್ತೆ ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ತನಿಖಾಧಿಕಾರಿಗಳ ಬಗ್ಗೆಕಣ್ಣೀರು ಸುರಿಸುತ್ತ ಶಿವಕುಮಾರ್‌ ದೂರಿದರು.

5.10:ಸಂಬಂಧವಿಲ್ಲದ ವಿಚಾರಗಳ ಬಗ್ಗೆ ವಿವರ‌ ಕೇಳುತ್ತಿಲ್ಲ. ಎಲ್ಲವೂ ಸಂಬಂಧಿಸಿದ ಪ್ರಕರಣದ‌ ಬಗ್ಗೇ ತನಿಖೆ ನಡೆಸಲಾಗುತ್ತಿದೆ,ತನಿಖೆಯನ್ನು ಯಾವ ರೀತಿ‌‌ ನಡೆಸಬೇಕು. ಯಾವ ಪ್ರಶ್ನೆ ಕೇಳಬೇಕು ಎಂಬುದನ್ನು ತನಿಖಾ ಸಂಸ್ಥೆಯೇ ನಡೆಸುತ್ತಿದೆ. ಅಲ್ಲದೆ ವಿಚಾರಣೆಗೆ ಯಾರನ್ನು ಕರೆಯಿಸಬೇಕು ಎಂಬುದನ್ನು ಸಂಸ್ಥೆಯೇ‌ ನಿರ್ಧರಿಸುತ್ತದೆ. ಆರೋಪಿ ಅನುಕೂಲಕ್ಕೆ ತಕ್ಕಂತೆ ತನಿಖೆ ನಡೆಸುವುದಿಲ್ಲ ಎಂದು ಇ.ಡಿ. ಪರ ವಕೀಲ ನಟರಾಜ್ ಹೇಳಿದರು.

5.05:ಆಯಾಸ ಆದರೂ ಡಿಕೆಶಿ‌ ಅವರ‌ ವಿಚಾರಣೆ ಮುಂದುವರಿಸಲಾಗಿದೆ. ಸತತ 120 ಗಂಟೆ ವಿಚಾರಣೆ‌ ನಂತರ ಯಾರೂ ಹರ್ಷದಿಂದ ಇರಲು‌ ಸಾಧ್ಯವಿಲ್ಲ. ಪ್ರಶ್ನೆಗಳಿಗೆ‌ ಸಮರ್ಪಕ ಉತ್ತರ ನೀಡಲು‌‌ ಅಸಾಧ್ಯ. ಯಾವುದೋಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದೆಲ್ಲವೂ ಇ.ಡಿ. ಅಧಿಕಾರಿಗಳಿಗೆ ಸಂಬಂಧವೇ ಇಲ್ಲ. ಎಂಟು‌ ದಿನಗಳ ಕಾಲ ಸತತ ತನಿಖೆ ನಡೆಸಿದರೂ ಇ.ಡಿ.ಗೆ ಸಮಾಧಾನ ಇಲ್ಲ. ಅವರ‌ ಪುತ್ರಿಯನ್ನೂ ಸತತ 10 ಗಂಟೆ ವಿಚಾರಣೆ ನಡೆಸಲಾಗಿದೆ.

4.58:ಇ.ಡಿ. ವಿಚಾರಣೆ ಎದುರಿಸುತ್ತಲೇ ಪ್ರಾಣ ತ್ಯಜಿಸಿದ ಪ್ರಕರಣಗಳ ಉದಾಹರಣೆ ನಮ್ಮ ದೇಶದಲ್ಲಿ ಇದೆ. ನೀವು ಈಗ ಡಿಕೆಶಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡದೆ ಇದ್ದರೆ ಬಹಳ ಕಷ್ಟ ಇದೆ. ವಿಚಾರಣೆಯ ನಂತರ ನ್ಯಾಯಾಲಯದ ತೀರ್ಪು ಏನೇ ಬರಲಿ, ಅವರನ್ನು ಮೊದಲು ಆಸ್ಪತ್ರೆಗೆ ದಾಖಲು ಮಾಡಿ ಇದು ನನ್ನ ಪ್ರಾರ್ಥನೆ ಎಂದು ಸಿಂಗ್ವಿ ಹೇಳಿದರು.

4.55:ಶಿವಕುಮಾರ್ ಅವರನ್ನು ಅಗೌರವದಿಂದ‌ ನೋಡಿಕೊಂಡು ಕಾನೂನು ಉಲ್ಲಂಘನೆ ಮಾಡಲಾಗಿದೆ. ಬಂಧನಕ್ಕೆ‌ ಮೊದಲೂ ಸತತವಾಗಿ ವಿಚಾರಣೆ‌ ನಡೆಸಿ ಇದುವರೆಗೂ 120 ಗಂಟೆಗೂ‌ ಅಧಿಕ ಅವಧಿಗೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.ಸಂಬಂಧವಿಲ್ಲದ ಆದಾಯ ತೆರಿಗೆ ಇಲಾಖೆಯ ಪ್ರಕರಣವನ್ನೂ ಈಗ ವಿಚಾರಣೆಗೆ ಒಳಪಡಿಸಲಾಗಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು,ನಿತ್ಯವೂ ಡಿಕೆಶಿ ಅವರನ್ನು ವಿಚಾರಣೆಗೆ ಒಳಪಡಿಸುವುದನ್ನು ರೂಢಿ‌ ಮಾಡಿಕೊಳ್ಳಲಾಗಿದೆ. ಇದು ಸೂಕ್ತವಲ್ಲ ಎಂದು ಸಿಂಗ್ವಿ ನ್ಯಾಯಾಲಯಕ್ಕೆ ಹೇಳಿದರು.

4.49:ತೀವ್ರ ರಕ್ತದ ಒತ್ತಡವು ಹೃದಯಾಘಾತಕ್ಕೂ ಕಾರಣವಾಗಲಿದೆ. ಆದರೂ ಅವರನ್ನು ಆಸ್ಪತ್ರೆಗೆ ದಾಖಲಿಸದೆ ವಿಚಾರಣೆಗೆ ಒಳಪಡಿಸಲಾಗಿದೆ‌. ಅವರ ಕುಟುಂಬ ವೈದ್ಯರಿಗೂ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ‌ನೀಡಲಾಗಿಲ್ಲ. ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಸಿಂಗ್ವಿ ನ್ಯಾಯಾಲಯಕ್ಕೆ ಹೇಳಿದರು.

4.47:ಆರೋಗ್ಯ ಸರಿ ಇಲ್ಲದಿದ್ದರೂ ವಿಚಾರಣೆ ನಡೆಸಲಾಗಿದೆ. ಡಿಕೆಶಿ ಅವರ ರಕ್ತದ‌ ಒತ್ತಡದ ವಿವರ ನೀಡಿದ ಹಿರಿಯ ವಕೀಲಸಿಂಗ್ವಿ

4.45:ಶಿವಕುಮಾರ್‌ ಪರ ‌ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡನೆ ಆರಂಭ...

4.42:ಒಂದಕ್ಕೊಂದು ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ನಮಗೆ ಕಾಯ್ದೆ ಅಡಿ ಅವಕಾಶ ಇದೆ ಎಂದ ಇ.ಡಿ. ಪರ ವಕೀಲ ನಟರಾಜ್ ಹೇಳಿದರು.

4.41:ಮೇಲ್ನೋಟಕ್ಕೆ ಅಕ್ರಮಗಳಿಗೆ ಒಂದಕ್ಕೊಂದು ಸಂಬಂಧ‌ ಇದೆ ಎಂಬುದು ಕಂಡುಬರುತ್ತಿದೆ. ಹಾಗಾಗಿ ವಿಚಾರಣೆ ಅಗತ್ಯವಿದೆ ಎಂದು ಇ.ಡಿ. ವಕೀಲರು ಹೇಳಿದರು.

4.40:ಅಕ್ರಮ ಹಣ ದೊರೆತ ಪ್ರಕರಣದ ಅಡಿ ಇತರೆ ಪ್ರಕರಣಗಳ ತನಿಖೆಯನ್ನು ನೀವು ನಡೆಸುವುದು ಹೇಗೆ ಎಂದು ನ್ಯಾಯಪೀಠ ಕೇಳಿತು.

4.39:ಡಿಕೆಶಿ ಅಕ್ರಮಗಳ‌ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ. ಕಾಯ್ದೆಯು ಅದನ್ನು ಸೂಚಿಸುತ್ತಿದೆ ಎಂದ ಇ.ಡಿ. ವಕೀಲರು.

4.38:8.59ಕೋಟಿ ಹಣ ಇವರ ಮನೆಯಲ್ಲಿ ಪತ್ತೆಯಾಗಿದೆ,ಇವರಿಗೆ ದಾಖಲೆಗಳು ಮತ್ತು ವ್ಯವಹಾರಗಳ ಕುರಿತು ಅರಿವು ಇದ್ದರೂ‌ ಸತ್ಯವನ್ನು ಬಾಯಿ ಬಿಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ಇ.ಡಿ. ವಕೀಲರು ಹೇಳಿದರು.

4.33:ಹಣವನ್ನು ಹೊಂದಿರುವುದು ಹಾಗೂ ಅಕ್ರಮಹಣ ವರ್ಗಾವಣೆ ತಡೆ‌ಕಾಯ್ದೆ‌ ಅಡಿ ಬಂಧಿಸಲಾಗಿದೆ. ಆದರೂ ಅದರ ಬಗ್ಗೆ ಸತ್ಯ ಹೇಳುತ್ತಿಲ್ಲ,ಹಣ ಎಲ್ಲಿಂದ‌ ಬಂತು, ಎಲ್ಲಿಗೆ ಹೋಗಿದೆ, ಯಾರು ಹೂಡಿಕೆ‌ ಮಾಡಿದ್ದರು ಎಂಬುದನ್ನು ಪತ್ತೆ ಮಾಡಿ ಎಂದು ನ್ಯಾಯಪೀಠ ‌ಹೇಳಿತು.

4.30:ಕಾಯ್ದೆಯ ವ್ಯಾಖ್ಯಾನದಡಿಯೇ ನಾವು ತನಿಖೆ ನಡೆಸುತ್ತಿದ್ದೇವೆ. ಸೆಕ್ಸನ್ 2 ಯು ಅಡಿ ಕ್ರಮ ಕೈಗೊಂಡು ವಿಚಾರಣೆ ನಡಸಲಾಗಿದೆ. ಅಕ್ರಮ ಆಸ್ತಿಯನ್ನು ಹೊಂದುವುದು ‌ಅಪರಾಧ ಪ್ರಕರಣ ಎಂದು ವಕೀಲರು ಹೇಳಿದರು.

4.28:ಡಿ.ಕೆ. ಶಿವಕುಮಾರ್‌ ಅವರ 23 ವಯಸ್ಸಿನ ಮಗಳ ಹೆಸರಲ್ಲೂ ಸಾಕಷ್ಟು ಆಸ್ತಿ ಇದೆ. 800 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. ವಿಚಾರಣೆಗಾಗಿ ಮತ್ತೆ ಐದು ದಿನ ವಶಕ್ಕೆ ನೀಡಬೇಕು. ಇವರು ಪ್ರಭಾವಿ, ಹಣ ಇರುವ ವ್ಯಕ್ತಿ. ತನಿಖೆಗೆ ಅಡ್ಡಿ ಪಡಿಸುವ‌ ರೀತಿ ಬೆಂಬಲಿಗರೂ ಪ್ರತಿಭಟನೆ ನಡೆಸಿ ಗಮನ ಸೆಳೆಯುತ್ತಿರುವುದು ಕಂಡುಬಂದಿದೆ. ಹಣವು ಅಕ್ರಮವಾಗಿ ವರ್ಗಾವಣೆ ಆಗಿದೆ. ಆದರೆ, ಇವರು ವಿಚಾರಣೆ‌ ವೇಳೆ ಸಹಕಾರ ನೀಡದೆ‌ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮನವಿ‌ ಮಾಡಿದ ಇ.ಡಿ.‌ವಕೀಲರು.

4.25: ಡಿ.ಕೆ.ಶಿವಕುಮಾರ್‌ ಕುಟುಂಬ ಸದಸ್ಯರು ಒಟ್ಟಾರೆ 350ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅತಿಯಾದ ವ್ಯವಹಾರ ನಡೆಸಿರುವುದು ಕಂಡುಬಂದಿದೆ. ಬೇನಾಮಿ ಆಸ್ತಿಗಳು ಪತ್ತೆಯಾಗಿವೆ. 377ಖಾತೆಗಳಿಂದ ಭಾರಿ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಆಗಿದೆ. ಇದಕ್ಕೆದಾಖಲೆಗಳು ಇವೆ, ತನಿಖೆ ವೇಳೆ ಸಾಕಷ್ಟು ಬೇನಾಮಿ ಆಸ್ತಿ ಇವರು ಹಾಗೂ ಕುಟುಂಬ ಸದಸ್ಯರ ಹೆಸರಲ್ಲಿ ಕಂಡುಬಂದಿರುವುದರಿಂದ ಹೆಚ್ಚಿನ ವಿಚಾರಣೆ ಆಗತ್ಯ ಎಂದು ಇ.ಡಿ ವಕೀಲರು ನ್ಯಾಯಾಲಯಕ್ಕೆ ಹೇಳಿದರು.

4.22:ಮತ್ತೆ ಐದು ದಿನಡಿ.ಕೆ.ಶಿವಕುಮಾರ್‌ ಅವರನ್ನುವಶಕ್ಕೆ ನೀಡಬೇಕು ಎಂದು ಇ.ಡಿ. ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ತನಿಖೆಗೆ ಸಹಕಾರ ನೀಡದಿರುವುದರಿಂದ ಇನ್ನಷ್ಟು ದಿನ ಕಸ್ಟಡಿಗೆ ಬೇಕು ಎಂದು ವಕೀಲರ ಮನವಿ.

4. 20:ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

4. 12: ಕೋರ್ಟ್‌ ಹಾಲ್‌ಗೆ ಡಿ.ಕೆ.ಶಿವಕುಮಾರ್‌ ಅವರನ್ನು ಕರೆತಂದ ಪೊಲೀಸರು. ಕೋರ್ಟ್‌ ಕಟಕಟೆಯಲ್ಲಿ ನಿಂತ ಡಿ.ಕೆ. ಶಿವಕುಮಾರ್‌

4. 00:ಕೋರ್ಟ್‌ ಹಾಲ್‌ಗೆ ಆಗಮಿಸಿದ ನ್ಯಾಯಾಧೀಶರು

3. 36:ಇ.ಡಿ ವಿಶೇಷ ನ್ಯಾಯಾಲಯಕ್ಕೆ ಆಗಮಿಸಿರುವ ಡಿ. ಕೆ. ಶಿವಕುಮಾರ್‌ ನ್ಯಾಯಾಲಯದ ಕಾರಿಡಾರ್‌ನಲ್ಲಿ ಪೋಲಿಸರ ಭದ್ರತೆಯಲ್ಲಿ ನಿಂತಿದ್ದಾರೆ.

2. 58:ದೆಹಲಿಯ ರೋಸ್‌ ಅವೆನ್ಯೂ ಇ.ಡಿ. ವಿಶೇಷ ನ್ಯಾಯಾಲಯಕ್ಕೆ ಡಿ.ಕೆ. ಶಿವಕುಮಾರ್‌ ಆಗಮನ

2. 30: ದೆಹಲಿಯ ರೋಸ್‌ ಅವೆನ್ಯೂ ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ಹಾಜರಿರುವ ಡಿ.ಕೆ. ಶಿವಕುಮಾರ್‌ ಪರ ವಕೀಲರು

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT