ಬೆಂಗಳೂರು: ಜೀವನ್ಬಿಮಾನಗರದ ಕೇಂದ್ರೀಯ ವಿದ್ಯಾಲಯ ಕ್ವಾರ್ಟರ್ಸ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಮಾವಿನ ಕಾಯಿ ಕೀಳಲು ಮರ ಹತ್ತಿದ್ದ ಭರತ್ (13) ಎಂಬಾತ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.
ಅಸ್ವಸ್ಥನಾಗಿ ಮರದಲ್ಲೇ ಸಿಲುಕಿಕೊಂಡಿದ್ದ ಆತನನ್ನು ಸ್ಥಳೀಯರು ಕೆಳಗೆ ತಂದು ಸಿಎಂಎಚ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗಮದ್ಯೆಯೇ ಆತ ಕೊನೆಯುಸಿರೆಳೆದಿದ್ದ. ಘಟನೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ(ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭರತ್, ಆಂಧ್ರಪ್ರದೇಶದ ಅಯ್ಯಪ್ಪ ಹಾಗೂ ಮರಳಮ್ಮ ದಂಪತಿಯ ಹಿರಿಯ ಮಗ. 4 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಈ ಕುಟುಂಬ, ಸುಧಾಮನಗರದಲ್ಲಿ ನೆಲೆಸಿತ್ತು. ಬಿಬಿಎಂಪಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಭರತ್, ಬೆಳಿಗ್ಗೆ ಸ್ಥಳೀಯ ಹುಡುಗರ ಜತೆ ಮಾವಿನ ಕಾಯಿ ಕೀಳಲು ತೆರಳಿದ್ದ.
‘ಮರದ ಕೊಂಬೆಗಳ ನಡುವೆಯೇ ವಿದ್ಯುತ್ ತಂತಿ ಹಾದು ಹೋಗಿದೆ. ಭರತ್ ಮರ ಹತ್ತಿ ಹಸಿ ಕೋಲಿನಿಂದ ಕಾಯಿಗೆ ಹೊಡೆಯುತ್ತಿದ್ದಾಗ ಕೋಲು ತಂತಿ ಮೇಲೆ ಬಿದ್ದಿತು. ಇದರಿಂದ ವಿದ್ಯುತ್ ಪ್ರವಹಿಸಿದ್ದು, ಆತ ಚೀರಿಕೊಂಡು ಕೊಂಬೆ ಮೇಲೇ ಬಿದ್ದ. ಅರ್ಷಾದ್ ಇಸ್ಮಾಯಿಲ್ ಎಂಬುವರು ಭರತ್ನನ್ನು ಕೆಳಗೆ ತಂದು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.