ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದ ಬಳಿಯ ಮಹಾಂತಾಳಪುರದಲ್ಲಿ ಕಾಡಾನೆಯು ವೃದ್ಧೆಯೊಬ್ಬರನ್ನು ತುಳಿದು ಸಾಯಿಸಿದೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಶಿವಮ್ಮ (75) ಎಂದು ಗುರುತಿಸಲಾಗಿದೆ.
ಮೂರು ಕಾಡಾನೆಗಳು ಶನಿವಾರ ಈ ಭಾಗದಲ್ಲಿ ಬೀಡುಬಿಟ್ಟಿದ್ದವು. ಸಂಜೆ 6 ಗಂಟೆಯ ಹೊತ್ತಿಗೆ ಬಹಿರ್ದೆಸೆಗೆಂದು ತೋಟದ ಹೊರಭಾಗದಲ್ಲಿರುವ ತೋಪಿಗೆ ಶಿವಮ್ಮ ಹೋಗಿದ್ದರು. ಈ ಸಂದರ್ಭದಲ್ಲಿ ಆನೆ ದಾಳಿ ನಡೆಸಿದೆ.
ಪ್ರತಿಭಟನೆ: ಆಕ್ರೋಶಗೊಂಡ ಗ್ರಾಮಸ್ಥರು, ಮಹಾಂತಾಳಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
₹ 5 ಲಕ್ಷ ಪರಿಹಾರ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್, ಇಲಾಖೆ ವತಿಯಿಂದ ಶಿವಮ್ಮ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು.