ಹನೂರು: ಕಾವೇರಿ ವನ್ಯಧಾಮದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಲಗತಂಬಡಿ (38) ಎಂಬುವವರು, ಕಾಡಾನೆ ದಾಳಿಗೆ ಮಂಗಳವಾರ ಬಲಿಯಾಗಿದ್ದಾರೆ.
ಗೋಪಿನಾಥಂ ವನ್ಯಜೀವಿ ವಲಯದ ನಾಗಮಲೆ ಬೀಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂಟಿ ಸಲಗವೊಂದು ಹಲಗತಂಬಡಿ ಅವರ ಮೇಲೆ ಏಕಾಏಕಿ ಎರಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದರು.
ಹಲಗತಂಗಡಿ ಅವರು ನಾಗಮಲೆಯ ಬೇಟೆ ತಡೆ ಶಿಬಿರದಲ್ಲಿ ಎಂಟು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಪ್ರತಿಭಟನೆ: ಪರಿಹಾರ ನೀಡುವಂತೆ ಒತ್ತಾಯಿಸಿ, ಅವರ ಕುಟುಂಬದ ಸದಸ್ಯರು ಇಲ್ಲಿನ ಆರೋಗ್ಯ ಕೇಂದ್ರದ ಮುಂದೆ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಅವರು ಪರಿಹಾರದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.