ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳು ಏಳು ಕಳೆದರೂ ಇಳಿಯದ ಕೃಷಿ ಸಾಲದ ಹೊರೆ; 'ಅನ್ನದಾತನ ಮೊಣಕೈಗೆ ಬೆಣ್ಣೆ '

Last Updated 5 ಜನವರಿ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ರೈತರ ಬೆಳೆ ಸಾಲ ಮನ್ನಾ ವಿಚಾರ ಮುನ್ನೆಲೆಗೆ ಬಂದಿತ್ತು. ‘ಅಧಿಕಾರ ಲಾಲಸೆಯಿಂದ ಗಿಲೀಟಿನ ಭರವಸೆ ನೀಡಿದ್ದಾರೆ’ ಎಂದು ಟೀಕೆಗೆ ಗುರಿಯಾಗುವ ಮುನ್ನವೇ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರನ್ನು ಋಣ ಮುಕ್ತಗೊಳಿಸುವ ಆಣೆ ಮಾಡಿದ್ದರು. ಬೊಕ್ಕಸದಲ್ಲಿ ಏನಿದೆ ಎನ್ನುವುದಕ್ಕಿಂತಲೂ ಕೊಟ್ಟ ಮಾತು ಉಳಿಸಿಕೊಳ್ಳುವ ಉಮೇದು ಅವರದಾಗಿತ್ತು!

ಆದರೀಗ ಏಳು ತಿಂಗಳು ಕಳೆಯಿತು. ಯೋಜನೆ ಅನುಷ್ಠಾನದ ಹಾದಿಯುದ್ದಕ್ಕೂ ಗೊಂದಲ– ಗೋಜಲು ತುಂಬಿವೆ. ಪರಿಣಾಮ, ಇದು ರಾಜಕೀಯ ಜಿದ್ದಿನ ವಿಷಯವಾಗಿಯೂ ಮಾರ್ಪಟ್ಟಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ಎರಡು ದಿನಗಳನ್ನು ಈ ಗದ್ದಲ ನುಂಗಿತ್ತು. ಬಿಜೆಪಿಯ ಆರೋಪಕ್ಕೆ ಈಗ ಅಸಂಖ್ಯ ರೈತರೂ ದನಿಗೂಡಿಸಿದ್ದಾರೆ.

ಅಧಿಕಾರ ಚುಕ್ಕಾಣಿ ಹಿಡಿದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುವ ‘ಆಮಿಷ’ವನ್ನು ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ನೀಡಿದ್ದರು. ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಳಿಗೆಯಲ್ಲೇ ಯಡಿಯೂರಪ್ಪ ರೈತರ ಮೂಗಿಗೆ ‘ಸಾಲ ಮನ್ನಾ’ದ ತುಪ್ಪ ಸವರಿದ್ದರು. ಆದರೆ, ಅವರಿಗೆ ಅಧಿಕಾರ ದಕ್ಕಿಸಿಕೊಳ್ಳಲು ಆಗಲಿಲ್ಲ.

ಕಾಂಗ್ರೆಸ್‌ ‘ಮುಲಾಜಿ’ನಲ್ಲಿ ಅಧಿಕಾರದ ಚುಕ್ಕಾಣಿ ತನ್ನ ಕೈಗೆ ಬರುತ್ತಿದ್ದಂತೆ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಆಡಿದ ಮಾತುಗಳು, ವಿವಾದಕ್ಕೆ ಕಾರಣವಾಗಿದ್ದವು.

‘ಪೂರ್ಣ ಬಹುಮತ ಸಿಕ್ಕಿಲ್ಲ. ಸಾಲ ಮನ್ನಾ ಘೋಷಣೆ ಮಾಡಿದ ತಕ್ಷಣ ಆದೇಶ ಹೊರಡಿಸಲು ನಾನೇನು ದುಡ್ಡಿನ ಗಿಡ ಹಾಕಿದ್ದೀನಾ‘ ಎನ್ನುವಲ್ಲಿಂದ, ‘ನಾನು ಒಬ್ಬರ ಹಂಗಿನಲ್ಲಿದ್ದೇನೆ, ನನ್ನನ್ನು ನಂಬಿ. ನನಗಿರೋದು ಒಬ್ಬನೇ ಮಗ, ಅವನ ಮೇಲೆ ಆಣೆ ಮಾಡ್ತೀನಿ. ಸಾಲ ಮನ್ನಾ ಮಾಡದೇ ನಿರ್ಗಮಿಸೋಲ್ಲ’ ಎಂದು ಹೇಳಿ ಕಣ್ಣೀರಿಡುವಷ್ಟು ಅನಿವಾರ್ಯತೆಗೆ ಕುಮಾರಸ್ವಾಮಿ ಅವರನ್ನು ತಂದಿಟ್ಟಿದೆ. ಈ ನಡುವೆ ಅನ್ನದಾತರ ಆತ್ಮಹತ್ಯೆ ಸಾಲು, ಸರ್ಕಾರಕ್ಕೆ ಸವಾಲಾಗಿಯೇ ಮುಂದುವರಿದಿದೆ.

‘ಮೈತ್ರಿ’ಯ ನೆರಳಿನಡಿಯಲ್ಲಿ ಸಹಕಾರ ಸಂಘಗಳಲ್ಲಿರುವ ₹ 1 ಲಕ್ಷದವರೆಗಿನ ಸಾಲದ ಜೊತೆಗೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ₹ 2 ಲಕ್ಷವರೆಗಿನ ಸಾಲ ಮನ್ನಾ, ಪ್ರಾಮಾಣಿಕವಾಗಿ ಸಾಲ ತೀರಿಸಿದ ರೈತರಿಗೆ ₹ 25 ಸಾವಿರ ಪ್ರೋತ್ಸಾಹ ಧನ ಘೋಷಣೆ ಕುಮಾರಸ್ವಾಮಿ ಪ್ರದರ್ಶಿಸಿದ ದಿಟ್ಟತನ. ಸಹಕಾರಿ ಸಂಘಗಳ ಸಾಲ ಮನ್ನಾ ಫಲಾನುಭವಿಗಳು ರಾಷ್ಟ್ರೀಕೃತ ಬ್ಯಾಂಕ್‌ ಬೆಳೆ ಸಾಲ ಮನ್ನಾ ಯೋಜನೆಗೆ ಅರ್ಹರಿರುವುದಿಲ್ಲ. ಆದರೆ, ಯೋಜನೆಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎನ್ನುವ ಕೋಪ ಕುಮಾರಸ್ವಾಮಿ ಅವರದ್ದು. ಈ ಸವಾಲು ಎದುರಿಸುವುದು, ಅದಕ್ಕೊಂದು ಪರಿಹಾರ ಕಾಣುವುದು ಅಷ್ಟು ಸುಲಭವಲ್ಲ.

ಸಾಲ ಮನ್ನಾ ಯೋಜನೆಗೆಂದೇ ಕಂದಾಯ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಸೌಲಭ್ಯ ಪಡೆಯಲು ಸಾಲ ಪಡೆದ ವಾಣಿಜ್ಯ ಬ್ಯಾಂಕುಗಳಿಗೆ ಬಂದು ರೈತರು ಹೆಸರು ನೋಂದಾಯಿಸಿಕೊಳ್ಳಬೇಕು. ಅದಕ್ಕೆ ಜನವರಿವರೆಗೆ ಸಮಯಾವಕಾಶ ನೀಡಲಾಗಿದೆ. ಆಧಾರ್‌, ರೇಷನ್‌ ಕಾರ್ಡ್‌, ಪಹಣಿ ಮಾಹಿತಿ ಸಲ್ಲಿಸಬೇಕು.

ವಾಣಿಜ್ಯ ಬ್ಯಾಂಕಿನ ಕೆಲವು ಶಾಖೆಗಳಲ್ಲಿ ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ಬರುವ ಮೂರು ಸಾವಿರಕ್ಕೂ ಹೆಚ್ಚು ರೈತರಿದ್ದಾರೆ. ಒಂದು ಬ್ಯಾಂಕ್‌ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಬಂದ ರೈತರಿಗೆ ದಿನ ನಮೂದಿಸಿ ಟೋಕನ್‌ ನೀಡಲಾಗುತ್ತಿದೆ. ಆ ದಿನದಂದು ರೈತರು ಬ್ಯಾಂಕ್‌ ಶಾಖೆಗೆ ತೆರಳಿ ಸ್ವಯಂ ದೃಢೀಕರಿಸಿದ ಪತ್ರದೊಂದಿಗೆ ಜಮೀನಿನ ಸರ್ವೆ ನಂಬರ್‌ ವಿವರ ನೀಡಿ ನೋಂದಣಿ ಮಾಡಿಕೊಳ್ಳಬೇಕು.

ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ
ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ

ರೈತರಿಂದ ಮಾಹಿತಿ ಸಂಗ್ರಹ ಕಾರ್ಯದಲ್ಲಿ ಗಣನೀಯ ಸಾಧನೆ ಆಗಿರುವುದು ಅಂಕಿಅಂಶ ಗಳಿಂದ ಗೊತ್ತಾಗುತ್ತದೆ. ಆದರೆ, ತಿರಸ್ಕೃತಗೊಂಡ ಅಥವಾ ಪರಿಶೀಲನೆಗೆ ಶಿಫಾರಸುಗೊಳ್ಳುವ ಅರ್ಜಿಗಳ ವಿಲೇವಾರಿ ತಾಲ್ಲೂಕು ಮಟ್ಟದ ಸಮಿತಿಯ ಹೊಣೆ.

ರೈತರ ಸ್ವಯಂ ದೃಢೀಕರಣವನ್ನು ಅನುಮೋದಿಸಿ ಸಾಲ ಮನ್ನಾಕ್ಕೆ ಈ ಸಮಿತಿ ಶಿಫಾರಸು ಮಾಡಿದ ಬಳಿಕ ರೈತರ ಸಾಲ (ಉಳಿತಾಯ) ಖಾತೆಗಳಿಗೆ ಹಣ ಜಮೆ ಆಗಲಿದೆ.

ಸಾಲ ಮನ್ನಾ ಘೋಷಣೆಯಾದ ದಿನದಿಂದ ರೈತರು ತಮ್ಮೂರಿನ ಸಹಕಾರಿ ಸಂಘ, ವಾಣಿಜ್ಯ ಬ್ಯಾಂಕುಗಳಿಗೆ ನಿತ್ಯ ಎಡತಾಕುತ್ತಿದ್ದಾರೆ. ಅಲ್ಲಿನ ಸಮಸ್ಯೆ ನೋಡಿದ ಅನೇಕ ಸಾಲಗಾರರಿಗೆ ತಮ್ಮ ಸಾಲ ಮನ್ನಾ ಆಗುವ ವಿಶ್ವಾಸವೇ ಕಳೆದುಹೋಗಿದೆ. ಸರ್ಕಾರ ವಿಧಿಸಿರುವ ಷರತ್ತು, ಪ್ರಕ್ರಿಯೆ, ಬ್ಯಾಂಕು ಸಿಬ್ಬಂದಿ ವರ್ತನೆಯಿಂದ ಆತಂಕಗೊಂಡಿರುವ ಅನ್ನದಾತರ ಮುಖದಲ್ಲಿ ಸಾಲ ಮನ್ನಾ ಎಂಬ ‘ತುಪ್ಪ’ ತುಟಿ ಸವರಿತೇ ಎಂಬ ಬಗ್ಗೆ ಇನ್ನೂ ಅನುಮಾನಗಳಿವೆ.

ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ
ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ

ನೋಂದಣಿಯೆಂಬ ಸಿಗದ ‘ಗಿಣಿ’: ಸಹಕಾರ, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‌ ಗಳಲ್ಲಿ ಸಾಲಮನ್ನಾ ನೋಂದಣಿ ಅರ್ಜಿ ಗೊಂದಲದ ಗೂಡಾಗಿದೆ. ಸರ್ಕಾರದ ಆದೇಶ ರೈತರ ಪಾಲಿಗೆ ಕಗ್ಗಂಟಾಗಿದೆ. ‘ನಮ್ಮದು ಪೋಸ್ಟ್‌ ಮನ್‌ ಕೆಲಸ. ಸರ್ಕಾರ ಏನು ಆದೇಶ ಮಾಡಿದೆ ಅಷ್ಟನ್ನು ಮಾತ್ರ ಮಾಡುತ್ತೇವೆ. ನಿಮ್ಮ ಸಾಲ ಮನ್ನಾ ಆಗುತ್ತದೆಯೇ ಎಂದು ನಮಗೇನು ಗೊತ್ತು’ ಎಂದು ದಬಾಯಿಸುವ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು, ಬಡ ರೈತರ ಪಾಲಿಗೆ ‘ಗುಮ್ಮ’ಗಳಾಗಿ ಕಾಣಿಸುತ್ತಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯ ಉತ್ತರ ರೋಷ ಹುಟ್ಟಿಸಿದೆ.

ಸಾಲ ಮನ್ನಾದ ಆಸೆಯಿಂದ ನಸುಕಿ ನಲ್ಲೇ ಎದ್ದು ಬ್ಯಾಂಕುಗಳ ಮುಂಬಾಗಿಲಲ್ಲಿ ಚಪ್ಪಲಿ ಇಟ್ಟು ಸರದಿಗಾಗಿ ಕಾಯುವ ದೈನೇಸಿ ಸ್ಥಿತಿಗೆ ಅನ್ನದಾತರು ತಲುಪಿ ದ್ದಾರೆ. ಮೈ ನಡುಗುವ ಚಳಿಯಲ್ಲೇ ಮಧ್ಯರಾತ್ರಿ ಬಂದು ಬ್ಯಾಂಕು ಮುಂದೆ ಹೊದ್ದು ಮಲಗುವವರೂ ಇದ್ದಾರೆ. ಅಂತೂ ಬೆಳಕು ಹರಿದು, ಬ್ಯಾಂಕು ತೆರೆಯುತ್ತಲ್ಲೇ ಸಿಬ್ಬಂದಿ ಬಳಿ ಕೈಮುಗಿದು ನಿಲ್ಲುವ ರೈತನಿಗೆ, ‘ಪಟ್ಟಿಯಲ್ಲಿ ನಿಮ್ಮ ಹೆಸರು, ಗ್ರಾಮದ ಹೆಸರಿಲ್ಲರೀ, ನಾವೇನು ಮಾಡೋದು. ಪಟ್ಟೀನ ಎಷ್ಟು ನೋಡಿದ್ರೂ ಅಷ್ಟೇ, ಸುಮ್ಮನೆ ತಲೆ ತಿನ್ನಬೇಡಿ. ನೀವು ಬೇಕಾದ್ರೆ ಡಿಸಿ, ತಹಶೀಲ್ದಾರ್‌ ಹತ್ರ ಕೇಳಿ’ ಎಂದು ಸಾಗಹಾಕಿದರೆ ಹೇಗಾಗಬೇಡ. ಇದು ‘ಸಾಲ ಮನ್ನಾ’ ಎಂಬ ಜನಪ್ರಿಯ ಘೋಷಣೆ, ಸದ್ಯದ ವಸ್ತುಸ್ಥಿತಿ.

ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ
ಬೇರೆ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ

ಬ್ಯಾಂಕುಗಳ ನೊಟೀಸ್‌ ಬೋರ್ಡ್‌ ಗಳಲ್ಲಿ ರೈತರ ಪಟ್ಟಿ ಅಂಟಿಸಲಾಗಿದೆ. ಅದರತ್ತ ದೃಷ್ಟಿನೆಟ್ಟ ರೈತ, ಹೆಸರು ಕಂಡಾಕ್ಷಣ ತನ್ನ ಸಾಲ ಮನ್ನಾ ಆಗಲಿದೆ ಎಂದು ಸಂಭ್ರಮಿಸುವ ಪರಿ ಬೇರೆ. ಆದರೆ, ವಾಸ್ತವದಲ್ಲಿ ಆ ಪಟ್ಟಿ ಸಾಲಗಾರ ಎನ್ನುವುದನ್ನೇ ತೋರಿಸಿದೆ ಎಂಬ ವಾಸ್ತವದ ಅರಿವು ಅನೇಕರಿಗಿಲ್ಲ. ಗೊಂದಲದ ಪಟ್ಟಿ, ಸಾಲಮನ್ನಾ ಸೂಚನೆಯ ಮಾಹಿತಿಯೇ ಇಲ್ಲದ ಕನ್ನಡ ಬಾರದ ಅಧಿಕಾರಿ, ಸಿಬ್ಬಂದಿ ರೈತರೊಂದಿಗೆ ವಾಗ್ವಾದ ನಡೆಸುತ್ತಿರುವುದು ಅನೇಕ ಕಡೆ ಮಾಮೂಲಿಯಾಗಿಬಿಟ್ಟಿದೆ.

*ಯಾರು ಎಷ್ಟು ಸಾಲ ಮಾಡಿದ್ದಾರೆ ಎನ್ನುವ ಲೆಕ್ಕ ಬ್ಯಾಂಕ್‌ಗಳಲ್ಲಿ ಇದೆ. ಅದನ್ನು ಮತ್ತೆ ರೈತರಿಂದ ಅರ್ಜಿ ಪಡೆದು ಖಚಿತಪಡಿಸಿಕೊಳ್ಳುವುದು ಏಕೆ ಎಂದು ಅರ್ಥವಾಗುತ್ತಿಲ್ಲ.

–ಭೈರೇಗೌಡ,‌ ಭಕ್ತರಹಳ್ಳಿ, ರೈತ ಸಂಘ, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT