ಬೆಳಗಾವಿ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸ್ಥಳಾಂತರಿಸಲಾದ ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ತಾಲ್ಲೂಕುಗಳ ವಿವಿಧ ಹಳ್ಳಿಗಳ ಜನರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಇಂಗಳಿ, ಯಡೂರವಾಡಿ, ಶಿವಗೂರ, ಜುಗುಳ ಶಹಾಪುರ, ರಡ್ಡೇರಟ್ಟಿ, ಸಪ್ತ ಸಾಗರ, ನಾಗನೂರ, ಬಣಜವಾಡ ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇಂಗಳಿ, ಮಾಂಜರಿ, ಯಡೂರ ಹಾಗೂ ಅಥಣಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸ್ ಡಿ ಆರ್ ಎಫ್ ತಂಡದ 45 ಮಂದಿ ನಿಯೋಜಿಸಲಾಗಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದ ಸೇನೆಯ 9೦ ಹಾಗೂ ಅಗ್ನಿಶಾಮಕ ದಳದ 75 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೇ, ವಿವಿಧ ಸ್ಥಳಗಳಲ್ಲಿ ಪೊಲೀಸರನ್ನೂ ಬಳಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಸದ್ಯ 30 ಬೋಟುಗಳನ್ನು ಬಳಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ (0831- 2407290) ಹಾಗೂ ಎಸ್ಪಿ ಕಚೇರಿಯಲ್ಲಿ (0831- 2405231) ಸಹಾಯವಾಣಿ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ನಾಗನೂರ ಪಿ.ಕೆ., ಸಪ್ತಸಾಗರ, ಕುಸನಾಳ, ಜಂಜರವಾಡ, ಇಂಗಳಿ, ಕಲ್ಲೋಳ, ಸಿದ್ದಾಪುರ ಗ್ರಾಮಗಳ 835 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.