ಬೆಂಗಳೂರು: ನಗರದಲ್ಲಿರುವ ಕೂಲಿ ಕಾರ್ಮಿಕರಿಗೆ ಅವರವರ ಊರಿಗೆ ಮರಳಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಸೌಲಭ್ಯ ಐಟಿಬಿಟಿ ವಲಯದ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಉಚಿತ ಪ್ರಯಾಣ ವ್ಯವಸ್ಥೆ ಸೋಮವಾರದಿಂದ ಮೂರು ದಿನ ಇರಲಿದೆ. ಹೀಗಾಗಿ, ಕಾರ್ಮಿಕರು ಗಾಬರಿಗೆ ಒಳಗಾಗಿ, ಅವಸರಪಡುವ ಅಗತ್ಯ ಇಲ್ಲಎಂದೂ ತಿಳಿಸಿದ್ದಾರೆ.
ಕಾರ್ಮಿಕರ ಕೈಯಲ್ಲಿ ಉದ್ಯೋಗ ಕಾರ್ಡ್ ಇದೆ. ಅದನ್ನು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ನಡೆಸಲಿದ್ದಾರೆ. ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ಎಂದು ದೃಢಪಡಿಸಿದ ಬಳಿಕ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದೂ ಸವದಿ ಹೇಳಿದರು.
ಕಾರ್ಮಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ ಅಷ್ಟೇ ಅಲ್ಲದೆ, ಇತರ ಕಡೆಗಳಿಂದಲೂ ಕರೆದುಕೊಂಡು ಹೋಗಲು ಉದ್ದೇಶಿಸಲಾಗಿದೆ. ವಲಯಗಳಾಗಿ ವಿಂಗಡಿಸಿ ಅಲ್ಲಿನ ಬಸ್ ನಿಲ್ದಾಣಗಳಿಂದ ಕರೆದುಕೊಂಡು ಹೋಗಲಾಗುವುದು ಎಂದರು.
ಆಯಾ ಜಿಲ್ಲೆಗಳಿಗೆ ತಲುಪಿದ ಪ್ರಯಾಣಿಕರನ್ನು ಅಲ್ಲಿಂದ ಅವರವರ ಊರುಗಳಿಗೆ ತಲುಪಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ. ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ಬಳಿಕ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದೂ ಅವರು ಹೇಳಿದರು.