ತುಮಕೂರು: ‘ಮೈತ್ರಿ ಅಂದರೆ ಇವರು ಅವರನ್ನು ಸೋಲಿಸುವುದು ಅವರು ಇವರನ್ನು ಸೋಲಿಸುವುದೇ ಆಗಿದೆ. ಎಚ್.ಡಿ.ಕುಮಾರ ಸ್ವಾಮಿ ಅವರು ನನ್ನ ಬೈದರೂ ಚಿಂತೆ ಇಲ್ಲ. ದೇವೇಗೌಡರು ಪಕ್ಷದಿಂದ ಹೊರಗೆ ಹಾಕಿದರೂ ಚಿಂತೆ ಇಲ್ಲ. ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿಯ ಸಹವಾಸ ಸಾಕು’ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರ ಸೋಲಿನ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
‘ಎರಡೂ ಪಕ್ಷದವರು ಒಂದಾಗಿದ್ದರೆ ಅದಕ್ಕೆ ಬೆಲೆ ಇದೆ. ಇಲ್ಲದಿದ್ದರೆ ಕಷ್ಟ. ಕಾಂಗ್ರೆಸ್ ಶಾಸಕರು ಒಂದು ರೀತಿ ಹೇಳಿಕೆ ನೀಡುವುದು, ನಮ್ಮ ಪಕ್ಷದವರು ಅದಕ್ಕೆ ಮತ್ತೊಂದು ಹೇಳಿಕೆ ನೀಡುವುದಾದರೆ ಮೈತ್ರಿಗೆ ಅರ್ಥ ಇಲ್ಲ’ ಎಂದು ಹೇಳಿದರು.
‘ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಘಟನೆಗಳನ್ನು ನೋಡಿ ರಾಜ್ಯದ ಜನರಿಗೆ ಸಾಕಾಗಿದೆ. ಗೊಂದಲಗಳೇ ಹೆಚ್ಚಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಇದು ಪರಿಣಾಮ ಬೀರಿದೆ’ ಎಂದು ವಿಶ್ಲೇಷಿಸಿದರು.