ಹಂಪಿ (ಎದುರು ಬಸವಣ್ಣ ವೇದಿಕೆ):ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಗುಡಿಯ ಎದುರಿನ ವರ್ಣರಂಜಿತ ಬಸವಣ್ಣ ವೇದಿಕೆಯಲ್ಲಿ ಶನಿವಾರ ರಾತ್ರಿ ತಂಗಾಳಿಯ ನಡುವೆ ಎರಡು ದಿನಗಳ ಹಂಪಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿಧ್ಯುಕ್ತ ಚಾಲನೆ ನೀಡಿದರು.
‘ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರಂತೆಯೇ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕೃಷ್ಣದೇವರಾಯನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ ಹಂಪಿಯಲ್ಲಿ ಜನಾಗ್ರಹದ ಮೇರೆಗೆ ಸರ್ಕಾರ ಉತ್ಸವವನ್ನು ಹಮ್ಮಿಕೊಂಡಿದೆ’ ಎಂದು ಶಿವಕುಮಾರ್ ಹೇಳಿದರು.
ನಟ ದರ್ಶನ್, ‘ಹಂಪಿಯಲ್ಲಿರುವಂಥ ಸ್ಮಾರಕಗಳನ್ನು ನೂರು ವರ್ಷವಾದರೂ ಕಟ್ಟಲು ಸಾಧ್ಯವಿಲ್ಲ. ಅವುಗಳನ್ನು ಎಲ್ಲರೂ ರಕ್ಷಿಸಬೇಕು’ ಎಂದರು.
‘ಉತ್ಸವಕ್ಕಾಗಿ ಸರ್ಕಾರ ಪ್ರತಿ ವರ್ಷ ಬಜೆಟ್ನಲ್ಲಿ ₹10 ಕೋಟಿ ಮೀಸಲಿಡಬೇಕು’ ಎಂದು ಸಂಸದ ವಿ.ಎಸ್.ಉಗ್ರಪ್ಪ ಪ್ರತಿಪಾದಿಸಿದರು.
ಸಂಜೆ ಬಳಿಕ ಐದು ವೇದಿಕೆಗಳಲ್ಲಿ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಸಾವಿರಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡಿದರು.