ಹುಬ್ಬಳ್ಳಿ: ವಿಧಾನಸಭೆ ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಬೀಳುವ ಪರಿಸ್ಥಿತಿ ಎದುರಾದರೆ ಬೆಂಬಲ ನೀಡುವ ಬಗ್ಗೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವ ಬಗ್ಗೆ ಯಾರು ಪ್ರಮಾಣಿಕವಾಗಿ ಮಾತುಕೊಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ,’ ಎಂದರು.
‘ರಾಜ್ಯ ಭೀಕರ ಪ್ರವಾಹ ಮತ್ತು ಮಳೆಗೆ ಸಿಲುಕಿ ಜನರು ಬೀದಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸ್ವಾರ್ಥ ಮುಖ್ಯವಲ್ಲ. ಮತ್ತೆ ಚುನಾವಣೆಗೆ ಹೋಗುವುದು ಸರಿಯಲ್ಲ,’ ಎಂದು ಹೇಳಿದರು.
‘ಪದೇಪದೇ ಚುನಾವಣೆಗೆ ಹೋಗುವುದರಿಂದ ರಾಜ್ಯಕ್ಕೆ ಹೊರೆಯಾಗುತ್ತದೆ. ಕೆಲವರು ಈ ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡಲು ವೇದಿಕೆ ಸಜ್ಜು ಮಾಡುತ್ತಿದ್ದಾರೆ,’ ಎಂದು ಮಾರ್ಮಿಕವಾಗಿ ಹೇಳಿದರು.
‘ಪೋನ್ ಟ್ಯಾಪಿಂಗ್, ಐಎಂಎ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಕೆಲವು ನ್ಯೂಸ್ ಚಾನಲ್ ಗಳು ಸ್ಪೆಷಲ್ ಎಪಿಸೋಡ್ ಮಾಡುತ್ತಿವೆ. ನನಗೂ ಐಎಂಎ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ತನಿಖೆಗೆ ಆದೇಶಿಸಿದ್ದೇ ನಾನು,’ ಎಂದು ಹೇಳಿದರು.