ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ ಪ್ರಗತಿಗೆ ಭಾಷ್ಯ ಬರೆದವರು

ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದ ಸಮಾಜವಾದಿ ವೈಜನಾಥ ಪಾಟೀಲ
Last Updated 2 ನವೆಂಬರ್ 2019, 19:36 IST
ಅಕ್ಷರ ಗಾತ್ರ

ವೈಜನಾಥ ಪಾಟೀಲರ ಜೀವನವೇ ಹೋರಾಟವಾಗಿತ್ತು. ಅವರೊಬ್ಬ ಸಮಾಜವಾದಿ. ಅವರದ್ದು ಬಂಡಾಯದ ಮನೋಭಾವ. ನಮ್ಮ ಪ್ರದೇಶಕ್ಕೆ ಕೆಲಸವಾಗುತ್ತಿಲ್ಲ ಎಂದು ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು. ಹೈದರಾಬಾದ್‌ ಕರ್ನಾಟಕಕ್ಕೆ 371(ಜೆ) ಅಡಿ ವಿಶೇಷ ಸ್ಥಾನಮಾನ ದೊರೆಯಲು ಅವರೇ ಮೂಲ ಕಾರಣಕರ್ತರು.

ಜಾತೀಯತೆ, ಆರ್ಥಿಕ ಅಸಮಾನತೆ ವಿರುದ್ಧ; ಜನಸಾಮಾನ್ಯರ ಪರ ಅವರ ಧ್ವನಿ ಸದಾ ಮೊಳಗುತ್ತಿತ್ತು.

ಬೀದರ್‌ ಜಿಲ್ಲೆ ಔರಾದ್‌ ತಾಲ್ಲೂಕಿನ ಹಕ್ಯಾಳ ಅವರ ಹುಟ್ಟೂರು. ಅಲ್ಲಿಯೇ ಪ್ರಾಥಮಿಕ, ಬೀದರ್‌ನಲ್ಲಿ ಬಿ.ಎ. ಪದವಿ ಪೂರೈಸಿ ಶಿಕ್ಷಕರಾದರು. ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು. ಬೀದರ್‌ ಸಮಾಜವಾದಿಗಳ ಗಟ್ಟಿಭೂಮಿ ಆಗಿತ್ತು. ಆರ್‌.ವಿ.ಬೀಡಪ್ಪ, ಭೀಮಣ್ಣ ಖಂಡ್ರೆ, ಕಾಶಿನಾಥರಾವ್‌ ಬೇಲೂರೆ, ದಯಾನಂದರಾವ್‌ ಅವರೊಟ್ಟಿಗೆ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯರಾದರು.

ಅವರ ಪತ್ನಿ ಜ್ಞಾನೇಶ್ವರಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯವರು. ‘ಮನೆ ಅಳಿಯ’ನಾಗಿ ಚಿಂಚೋಳಿಗೆ ಬಂದರು. ಇಲ್ಲಿಯೂ ರಾಜಕೀಯದಲ್ಲಿ ಸಕ್ರಿಯರಾದರು. ಜನತಾ ಪಕ್ಷ ಹುಟ್ಟಿದ ಮೇಲೆ ಅದರ ನಾಯಕರಾಗಿ ಬೆಳೆದರು.

ಜಾರ್ಜ್‌ ಫರ್ನಾಂಡೀಸ್‌, ಮಧು ದಂಡವತೆ, ಸುರೇಂದ್ರ ಮೋಹನ್‌, ಹೈದರಾಬಾದ್‌ನ ಕೇಶವರಾವ್‌ ಜಾಧವ, ಜೆ.ಎಚ್‌.ಪಟೇಲ್‌ ಅವರ ಜೊತೆ ನಾವಿಬ್ಬರೂ ಆತ್ಮೀಯ ಒಡನಾಟ ಹೊಂದಿದ್ದೆವು. ತುರ್ತು ಪರಿಸ್ಥಿತಿಯಲ್ಲಿ ಭೂಗತ ಆಂದೋಲನದಲ್ಲಿ ನಾವೆಲ್ಲ ಭಾಗಿಯಾಗಿದ್ದೆವು. ಜಾರ್ಜ್‌ ಫರ್ನಾಂಡೀಸ್‌ರ ನೆರವಿನಿಂದ ವೈಜನಾಥರು ‘ಬರೋಡಾ ಡೈನಮೈಟ್‌’ ತಂದಿದ್ದರು. ಅದನ್ನು ಕಲಬುರ್ಗಿಯಲ್ಲಿ ಸ್ಫೋಟಿಸುವ ಕುರಿತು ನನ್ನೊಂದಿಗೆ ಚರ್ಚಿಸಿದ್ದರು. ಕಾರಣಾಂತರಗಳಿಂದ ಇಲ್ಲಿ ಸ್ಫೋಟಿಸಲು ಆಗಲಿಲ್ಲ.ಅದನ್ನು ಬೀದರ್‌ಗೆ ಕಳಿಸಿದ್ದರು.

ವಿರೇಂದ್ರ ಪಾಟೀಲರು ಕಾಂಗ್ರೆಸ್‌ ಸೇರಿದರು. 1983ರ ಚುನಾವಣೆಯಲ್ಲಿ ಅವರ ವಿರುದ್ಧ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೈಜನಾಥ ಕೇವಲ 88 ಮತಗಳ ಅಂತರದಿಂದ ಪರಾಭವಗೊಂಡರು. ನಂತರ 1984ರಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿ, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ತೋಟಗಾರಿಕೆ ಸಚಿವರಾದರು. ಈ ಭಾಗದ ಶಿಕ್ಷಕರ ವೇತನ ತಾರತಮ್ಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸುತ್ತಿಲ್ಲ, ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂದು ರಾಮಕೃಷ್ಣ ಹೆಗಡೆ ವಿರುದ್ಧ ಬಂಡೆದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.

ಸಮಾಜವಾದಿ ಹೋರಾಟದ ಒಡನಾಡಿ ಹೈದರಾಬಾದ್‌ನ ಕೇಶವರಾವ್‌ ಜಾಧವ ಅವರೊಂದಿಗೆ ಚರ್ಚಿಸಿದ ವೈಜನಾಥ ಆಳ ಅಧ್ಯಯನ ಮಾಡಿ ವಿಸ್ತೃತ ವರದಿ ಸಿದ್ಧಪಡಿಸಿ ವಿಧಾನಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. ಈ ಭಾಗಕ್ಕೆ ಸೌಲಭ್ಯ ನೀಡಬೇಕು ಎಂಬ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸದಾದಾಗಪ್ರತ್ಯೇಕ ರಾಜ್ಯದ ಹೋರಾಟ ಆರಂಭಿಸಿದ್ದರು. ಕನ್ನಡ ರಾಜ್ಯೋತ್ಸವ ಬದಲು ಕರಾಳ ದಿನ ಆಚರಿಸಿದರು. ಪ್ರತ್ಯೇಕ ರಾಜ್ಯದ ಧ್ವಜಾರೋಹಣವನ್ನೂ ನೆರವೇರಿಸಿದ್ದರು. ಅದರ ಪರಿಣಾಮಈ ಭಾಗದ ಜನ ಜಾಗೃತಗೊಂಡರು. ಸರ್ಕಾರವೂ ಎಚ್ಚೆತ್ತುಕೊಂಡಿತು.ಅವರು ಈ ಕೆಲಸವನ್ನು ಆಗ ಮಾಡದೇ ಹೋಗಿದ್ದರೆ ನಮಗೆ 371 (ಜೆ) ಸ್ಥಾನಮಾನ ದೊರೆಯುತ್ತಿರಲಿಲ್ಲ.

ಆಳಂದದ ಕಮಲಾಕರ್‌ ಎಂಬ ವ್ಯಕ್ತಿಯ ಲಾಕಪ್‌ಡೆತ್‌ ವಿರುದ್ಧ ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಮಣಿದ ಸರ್ಕಾರ ಮೂವರು ಐಪಿಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.

ಅವರಿಗೆ ಮರೆವು ಜಾಸ್ತಿ. ದುಡುಕಿನ ನಿರ್ಧಾರ ಹೆಚ್ಚು. ವ್ಯವಸ್ಥೆಯ ವಿರುದ್ಧ ಸದಾ ಬಂಡಾಯ ಏಳುತ್ತಿದ್ದರು.ಸೋಷಲಿಸ್ಟ್ ಪಕ್ಷ, ಸಂಸ್ಥಾ ಕಾಂಗ್ರೆಸ್‌, ಜನತಾ ಪಕ್ಷ, ಕಾಂಗ್ರೆಸ್‌,ಕೆಜೆಪಿ ಸುತ್ತಿದ್ದರು.

ಇತ್ತೀಚೆಗೆ ಅವರ ಆರೋಗ್ಯ ಸರಿ ಇರಲಿಲ್ಲ.ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಭೇಟಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್‌ ಕಲಬುರ್ಗಿಗೆ ಬರುವವರಿದ್ದರು. ‘ಕನ್ಹಯ್ಯ ಕಾರ್ಯಕ್ರಮ ಯಶಸ್ವಿಯಾಗಬೇಕು; ಹೆಚ್ಚು ಜನರನ್ನು ಸೇರಿಸಿ’ ಎಂದು ವೈಜನಾಥ ನನಗೆ ಹೇಳಿದ್ದರು! ಅವರು ಎಷ್ಟೇ ಪಕ್ಷ ಸುತ್ತಿದ್ದರೂ ಅವರಲ್ಲಿಯ ಸಮಾಜವಾದಿ ಸದಾ ಜಾಗೃತವಾಗಿದ್ದ ಎಂಬುದಕ್ಕೆ ಈ ಮಾತೇ ಸಾಕ್ಷಿ.

(ಲೇಖಕರು ವೈಜನಾಥ ಪಾಟೀಲ ಅವರ ಒಡನಾಡಿ, ಮಾಜಿ ಶಾಸಕ)

ನಿರೂಪಣೆ: ಗಣೇಶ ಡಿ.ಚಂದನಶಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT