ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಬೇಡುವ ಕೈಯಲ್ಲ, ಕೈಚಾಚಲ್ಲ’

ವಾಟ್ಸ್‌ಆ್ಯಪ್‌ನಲ್ಲಿ ಸೆಲ್ಫಿ ವಿಡಿಯೊ ಹರಿಬಿಟ್ಟ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ
Last Updated 10 ನವೆಂಬರ್ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಭಗವಂತ ನಾನು ಹತ್ತು ಮಂದಿಗೆ ಸಹಾಯ ಮಾಡುವಷ್ಟು ಆಶೀರ್ವಾದ ಮಾಡಿದ್ದಾನೆ. ಇದು ಬೇಡುವ ಕೈ ಅಲ್ಲ. ಉಸಿರು ಇರೋವರೆಗೂ ಯಾರ ಮುಂದೂ ಕೈಚಾಚಲ್ಲ. ರಾಜಕೀಯ ಷಡ್ಯಂತ್ರಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ. ಸಿಸಿಬಿಗೆ ಹೆದರಿ ಪಲಾಯನ ಮಾಡಿರಲಿಲ್ಲ. ನಾನು ಬೆಂಗಳೂರು ಮಹಾನಗರದಲ್ಲೇ ಇದ್ದೇ...’

‘ಇ.ಡಿ ಡೀಲ್’ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆಯೇ ಅಜ್ಞಾತವಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ಶನಿವಾರ ಮಧ್ಯಾಹ್ನ ಸೆಲ್ಫಿ ವಿಡಿಯೊದಲ್ಲಿ ಈ ರೀತಿಯ ಹೇಳಿಕೆಯೊಂದನ್ನು ವಾಟ್ಸ್‌ಆ್ಯಪ್‌ ಮೂಲಕ ಹರಿಬಿಟ್ಟರು. ಅವರ ಮಾತುಗಳ ‍ಪೂರ್ಣ ವಿವರ ಇಲ್ಲಿದೆ..

‘15–20 ದಿನಗಳಿಂದ ಬೆಂಗಳೂರಿನ ನನ್ನ ಮನೆ ಸುತ್ತಮುತ್ತ ಕೆಲವರು ಆತಂಕದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಇತ್ತೀಚೆಗೆ ಮೊಳಕಾಲ್ಮುರಿನ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರಿಗೆ ಹೇಳಿದ್ದೆ. ಅದರ ಬೆನ್ನಲ್ಲೇ ಸಿಸಿಬಿ ಪೊಲೀಸರು ನನ್ನ ವಿರುದ್ಧ ಈ ರೀತಿ ದಾಳಿ ಮಾಡಿದರು.’

‘ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ನನ್ನ ಹೆಸರನ್ನು ಹೇಳಿದ ಕೂಡಲೇ ವಕೀಲರನ್ನು ಸಂಪರ್ಕ ಮಾಡಿದೆ. ಪೊಲೀಸರು ನನ್ನ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಸಿಸಿಬಿ ಕಚೇರಿಗೆ ಹೋಗೋಣ ಬನ್ನಿ ಎಂದೆ. ಅದಕ್ಕೆ, ‘ನಮಗೆ ನೋಟಿಸ್‌ ಬಂದಿಲ್ಲ. ಎಫ್‌ಐಆರ್‌ನಲ್ಲೂ ನಿಮ್ಮ ಹೆಸರಿಲ್ಲ. ಹೀಗಿರುವಾಗ, ಯಾವ ಕಾರಣ ಇಟ್ಟುಕೊಂಡು ಹೋಗಬೇಕು. ಕಾನೂನು ಬದ್ಧವಾಗಿ ನೋಟಿಸ್ ಕೊಟ್ಟರೆ ಮಾತ್ರ ಹೋಗೋಣ’ ಎಂದು ಅವರು ಹೇಳಿದ್ದರಿಂದ ಸುಮ್ಮನಾಗಿದ್ದೆ.’

‘ನಾನು ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿಲ್ಲ. ಇಷ್ಟು ದೊಡ್ಡ ನಗರ ಬಿಟ್ಟು ಹೊರಗಡೆ ಹೋಗಬೇಕಾದ ಅವಶ್ಯಕತೆಯೂ ನನಗಿಲ್ಲ. ಪೊಲೀಸ್ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಸುಳ್ಳು ಸುದ್ದಿ ಮಾಡಿಸುತ್ತಿದ್ದಾರೆ. ಸದ್ಯ ವಕೀಲರ ಸಲಹೆಗಳನ್ನಷ್ಟೇ ಪಾಲಿಸುತ್ತಿದ್ದೇನೆ.’

‘ಪೊಲೀಸ್ ಮಗನಾದ ನನಗೆ, ಪೊಲೀಸರ ಮೇಲೆ ಅಪಾರ ಗೌರವವಿದೆ. ಹಾಗಾಗಿ, ಇವತ್ತು ಕಾನೂನು ವಿಚಾರದಲ್ಲಿ ನಾನು ಎಲ್ಲೂ ಆತಂಕ ಪಡುವ ಪ್ರಶ್ನೆ ಬರೋದಿಲ್ಲ. ತಪ್ಪು ಮಾಡಿಲ್ಲ ಅಂದರೆ ಆತಂಕ ಎಲ್ಲಿಂದ ಬರುತ್ತದೆ? ಸಿಸಿಬಿಯವರು ನನ್ನ ವಿರುದ್ಧ ಸಣ್ಣ ಆಧಾರವಿದ್ದರೂ, ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತಾಡಿ ಎಲ್ಲರ ದಿಕ್ಕು ತಪ್ಪಿಸುವುದು ಬೇಡ. ಷಡ್ಯಂತ್ರಕ್ಕೆ ಒಳಗಾಗದೆ ಇನ್ನಾದರೂ ಪ್ರಾಮಾಣಿಕವಾಗಿ ನಡೆದುಕೊಳ್ಳಲಿ.’

‘ವಾಹಿನಿಗಳು ಪ್ರಸಾರ ಮಾಡುತ್ತಿರುವ ಸುದ್ದಿ ನೋಡಿದರೆ ನನಗೆ ನಗಬೇಕೋ? ಅಳಬೇಕೋ ತಿಳಿಯುತ್ತಿಲ್ಲ. ರಾಜ್ಯದಲ್ಲಿ ತುಂಬ ಕೆಟ್ಟ ಬೆಳವಣಿಗೆ ನಡೀತಾ ಇದೆ. ಅದು ಜನರಿಗೆ ಗೊತ್ತಾಗಬೇಕು. ಹೀಗಾಗಿ, ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ.

‘ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ವಕೀಲರ ಜತೆ ಇವತ್ತೇ (ಶನಿವಾರ) ಸಿಸಿಬಿ ಕಚೇರಿಗೆ ತೆರಳುತ್ತಿದ್ದೇನೆ’ ಎಂದು ರೆಡ್ಡಿ ಹೇಳುತ್ತಿದ್ದಂತೆಯೇ ವಿಡಿಯೊ ಮುಗಿಯುತ್ತದೆ. ಆ ನಂತರ ಅವರು ಕಾರಿನಲ್ಲಿ ಸಿಸಿಬಿ ಕಚೇರಿಗೆ ಹಾಜರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT