ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಪ್ರಗತಿಪರ ದಲಿತ ಒಕ್ಕೂಟಗಳ ಮಹಾಸಭೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಗುರುವಾರ ನಗರದಲ್ಲಿ ರ್ಯಾಲಿ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಾವಿರಾರು ಸದಸ್ಯರು ಸಂಗೊಳ್ಳಿ ರಾಯಣ್ಣ ವೃತ್ತದ ತನಕ ಮೆರವಣಿಗೆ ನಡೆಸಿ ಡಾ. ಬಿ.ಆರ್. ಅಂಬೇಡ್ಕರ್, ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಕರ್ನಾಟಕ ಮಾದಿಗ ಯುವಸಮಿತಿಯ ಪದಾಧಿಕಾರಿಗಳು ಕೂಡ ಸಿಎಎ ಬೆಂಬಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆಯುದ್ದಕ್ಕೂ ಮುಖಂಡರು ಸಿಎಎ ಬೆಂಬಲಿಸಿ ಸಂವಿಧಾನ ರಕ್ಷಿಸಿ, ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಿ, ದಲಿತರನ್ನು ರಕ್ಷಿಸಿ ಎನ್ನುವ ಸಂದೇಶಗಳು ಇರುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.
ಇದನ್ನೂ ಓದಿ...ಅಪಘಾತಕ್ಕೂ ನನ್ನ ಪುತ್ರನಿಗೂ ಸಂಬಂಧ ಇಲ್ಲ: ಸಚಿವ ಅಶೋಕ
ಸಚಿವ ಜಗದೀಶ ಶೆಟ್ಟರ್ ಮಾತನಾಡಿ ‘ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಮಾರಕ ಎಂದು ಕೆಲಸವಿಲ್ಲದ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಇದು ದೇಶದ್ರೋಹದ ಕೆಲಸ. ಈ ಕಾಯ್ದೆಯ ಉದ್ದೇಶ ಪೌರತ್ವ ನೀಡುವುದಾಗಿದೆ ಹೊರತು; ಪೌರತ್ವ ಕಸಿದುಕೊಳ್ಳುವುದು ಅಲ್ಲ’ ಎಂದರು.
‘ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ಶೇ 60ರಷ್ಟು ಜನ ದಲಿತರಿದ್ದಾರೆ. ಅವರಿಗೆ ಭಾರತದ ಪೌರತ್ವ ನೀಡುವುದು ಕಾಯ್ದೆಯ ಮುಖ್ಯ ಉದ್ದೇಶ. ರಾಜಕೀಯವಾಗಿ ನಿರುದ್ಯೋಗಿಯಾಗಿರುವ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನೀವು 40–50 ವರ್ಷಗಳಿಂದ ಕಾಂಗ್ರೆಸ್ನವರ ಮಾತು ಕೇಳಿ ಹಾಳಾಗಿದ್ದೀರಿ. ಮುಂದೆಯೂ ಇದೇ ತಪ್ಪು ಮಾಡಬೇಡಿ. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಕೊಟ್ಟಿದ್ದು ಬಿಜೆಪಿ ಮತ್ತು ನರೇಂದ್ರ ಮೋದಿ ಮಾತ್ರ’ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ತಪ್ಪು ಮಾಹಿತಿ ನೀಡಿ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಯ್ದೆಯಿಂದ ದಲಿತರಿಗೆ ಹಾಗೂ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ದಲಿತರನ್ನು ಶೈಕ್ಷಣಿಕವಾಗಿ ಮುಂದುವರಿಯಲು ಕಾಂಗ್ರೆಸ್ ಅವಕಾಶವೇ ನೀಡಲಿಲ್ಲ. ಏಳು ದಶಕದಲ್ಲಿ ಕಾಂಗ್ರೆಸ್ ದೇಶವನ್ನು ಹಾಳು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ...ಅಪಘಾತದಲ್ಲಿ ಇಬ್ಬರ ಸಾವು: ಪೊಲೀಸರಿಂದ ಸಚಿವನ ಮಗನ ರಕ್ಷಣೆ?
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಚಂದ್ರಶೇಖರ ಗೋಕಾಕ, ಲಕ್ಷ್ಮಣ ಬೀಳಗಿ, ಮಹೇಂದ್ರ ಕೌತಾಳ, ರಂಗನಾಯಕ ತಪೇಲಾ, ಅರುಣ ಹುದ್ಲಿ, ರಾಕೇಶ ದೊಡ್ಡಮನಿ, ಸುಭಾಷ ಅಂಕಲಕೋಟೆ, ಹನುಮಂತಪ್ಪ ದೊಡ್ಡಮನಿ, ಪರಶುರಾಮ ಪೂಜಾರ, ಶಶಿಕಾಂತ ಬಿಜವಾಡ, ಅನೂಪ ಬಿಜವಾಡ, ಬಸವರಾಜ ಅಮ್ಮಿನಬಾವಿ, ಮಂಜುನಾಥ ಬಿಜವಾಡ, ಬಸವರಾಜ ಅಮ್ಮಿನಬಾವಿ, ಗುರುನಾಥ ರೋಣ, ಅಣ್ಣಪ್ಪ ಗೋಕಾಕ, ನಾಗರಾಜ ಟಗರಗುಂಟಿ, ಬಸು ಜಾಧವ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.