ಬೆಂಗಳೂರು: ಪಕ್ಷದಲ್ಲಿನ ಬಂಡಾಯ ಶಮನಕ್ಕಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸಭೆ ಕರೆದಿರುವ ಬೆನ್ನಲ್ಲೇ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಲಂಡನ್ಗೆ ತೆರಳಿದ್ದಾರೆ.
ಕಾಂಗ್ರೆಸ್–ಬಿಜೆಪಿಯತ್ತ ವಾಲುತ್ತಿರುವ ಪಕ್ಷದ ಶಾಸಕರು, ನಾಯಕರನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಅತೃಪ್ತರ ಜತೆ ಸಂಧಾನ ನಡೆಸುವ ಸಲುವಾಗಿ ದೇವೇಗೌಡರು ಇದೇ 6ರಂದು ಸಭೆ ಕರೆದಿದ್ದಾರೆ.
‘ಕುಮಾರಸ್ವಾಮಿ ವರ್ತನೆಯ ಬಗ್ಗೆಯೇ ಅನೇಕರಿಗೆ ಅಸಮಾಧಾನ ಇದ್ದು, ಅದನ್ನು ಅನೇಕರು ತೋಡಿಕೊಂಡಿದ್ದರು. ಎಲ್ಲರನ್ನೂ ಮುಖಾಮುಖಿ ಮಾಡಿಸಿ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಗೌಡರು ಸಭೆ ಕರೆದಿದ್ದರು. ಅದಕ್ಕೆ ಕುಮಾರಸ್ವಾಮಿ ಗೈರು ಹಾಜಗುತ್ತಿರುವುದರಿಂದ ಸಭೆಯ ಉದ್ದೇಶವೇ ವಿಫಲವಾಗುವ ಸಂಭವ ಇದೆ’ ಎಂದು ಆ ಪಕ್ಷದ ವಿಧಾನಪರಿಷತ್ತಿನ ಸದಸ್ಯರೊಬ್ಬರು ಹೇಳಿದರು.
‘ಕುಮಾರ ಸ್ವಾಮಿ ಅವರ ಲಂಡನ್ ಪ್ರವಾಸ ದೇವೇಗೌಡರಿಗೆ ಮೊದಲೇ ಗೊತ್ತಿರ ಲಿಲ್ಲವೇ ಅಥವಾ ಗೊತ್ತಿದ್ದೂ ಸಭೆ ಕರೆದ ‘ಶಾಸ್ತ್ರ’ ಮಾಡಿ ದರೇ?’ ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದರು.
‘ವರಿಷ್ಠರು ಸಭೆ ಕರೆದಿದ್ದಾರೆ, ಆದರೆ ಯಾರು ಪ್ರಮುಖವಾಗಿ ಬರಬೇಕಿತ್ತೋ ಅವರೇ ಬರುತ್ತಿಲ್ಲ, ಹೀಗಾಗಿ ಈ ಸಭೆ ಕರೆದು ಪ್ರಯೋಜನ ಇಲ್ಲ. ಸಭೆಯನ್ನು ಮುಂದೂಡಲು ನಾವು ಕೋರಿಕೆ ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದರು.
ಆಡಿಯೊ ಗದ್ದಲದಿಂದ ದೂರ?: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೊ ಬಹಿರಂಗವಾದ ಬಳಿಕ ಕಾಂಗ್ರೆಸ್ ತನ್ನೆಲ್ಲ ಶಕ್ತಿ ಬಳಸಿಕೊಂಡು ವಿರೋಧಿಸುತ್ತಿದೆ.
‘ಈ ಆಡಿಯೊ ಸಾಕ್ಷ್ಯವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸುತ್ತಿದ್ದೇವೆ, ಆಪರೇಷನ್ ಕಮಲದ ನಿಜ ವಿಚಾರ ಈಗ ಬಯಲಾಗಿದೆ’ ಎಂದು ಕುಮಾರಸ್ವಾಮಿ ಶನಿವಾರ ಹೇಳಿಕೆ ನೀಡಿದ್ದರು. ಆದರೆ, ಅದನ್ನು ಬಿಟ್ಟರೆ, ಜೆಡಿಎಸ್ ಯಾವುದೇ ರೀತಿ ಪ್ರತಿ ಕ್ರಿಯಿಸಿಲ್ಲ. ಪಕ್ಷದ ಶಾಸಕರನ್ನೇ ಆಪರೇಷನ್ ಕಮಲಕ್ಕೆ ಸಿಲುಕಿಸಿ ಮೈತ್ರಿ ಸರ್ಕಾರ ಕೆಡವಿದ ಬಿಜೆಪಿಗೆ ಪಾಠ ಕಲಿಸಲು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿತ್ತು. ಆದರೆ, ಈ ವಿಷಯದಲ್ಲಿ ಮೌನ ವಹಿಸಿರುವುದು ಸರಿಯಲ್ಲ’ ಎಂದು ನಾಯಕರೊಬ್ಬರು ತಿಳಿಸಿದರು.
‘ಬಿಜೆಪಿ ಜತೆಗಿನ ಸಖ್ಯದ ವಿಷಯ ದಲ್ಲಿ ಕುಮಾರಸ್ವಾಮಿ ಅವರು ತನ್ನ ನಿಲುವನ್ನು ಇತ್ತೀಚೆಗೆ ಬದಲಾಯಿ
ಸಿದ್ದಾರೆ. ಮುಂದಿನ ರಾಜಕೀಯ ‘ಭವಿಷ್ಯ’ದ ದೃಷ್ಟಿಯಿಂದ ತಂತ್ರಗಾರಿಕೆ ಬದಲಾಗಿರಬಹುದು’ ಎಂದರು.
ಬಿಜೆಪಿ ಸನಿಹಕ್ಕೆ ಜೆಡಿಎಸ್?
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವು ಜೆಡಿಎಸ್ ಬಗೆಗೆ ಈ ಹಿಂದೆ ತಳೆದಿದ್ದ ನಿಲುವನ್ನು ಬದಲಿಸಿಕೊಂಡಿರುವುದಾಗಿ ಹೇಳಿದ್ದು, ಜೆಡಿಎಸ್ ಸಹ ಬಿಜೆಪಿಯತ್ತ ಮೃದು ಧೋರಣೆ ತಳೆಯುವ ಎಲ್ಲ ಲಕ್ಷಣ ಕಾಣಿಸಿದೆ.
‘ಅಪ್ಪ–ಮಕ್ಕಳನ್ನು ನಾಶ ಮಾಡುವುದೇ ನನ್ನ ಉದ್ದೇಶ ಎಂದು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂಬ ಯಡಿಯೂರಪ್ಪ ಅವರ ಮಾತು ಸ್ವಾಗತಾರ್ಹ. ಪಶ್ಚಾತ್ತಾಪದಿಂದ ಅವರು ಈ ಮಾತು ಹೇಳಿದ್ದರೆ ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಒಟ್ಟಾರೆ ಪಕ್ಷದ ಬದಲಾದ ನಿಲುವು ಎಂದು ವಿಶ್ಲೇಷಿಸಲಾಗಿದೆ.
ಸದ್ಯ ಜೆಡಿಎಸ್ಗೆ ಕಾಂಗ್ರೆಸ್ ಪ್ರಬಲ ಶತ್ರುವಾಗಿದ್ದು, ಕಾಂಗ್ರೆಸ್ ಶತ್ರು ವಾಗಿರುವ ಬಿಜೆಪಿಯನ್ನೇ ಮಿತ್ರನನ್ನಾಗಿ ಮಾಡಿಕೊಳ್ಳುವ ಹಳೆಯ ತಂತ್ರ ವನ್ನೇ ಜೆಡಿಎಸ್ನೆಚ್ಚಿಕೊಂಡಿರಬಹುದು ಎಂದು ಕೆಲವು ನಾಯಕರು ಅಂದಾಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.