ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೂಲ ಶಾಸಕರ ‘ಕುದಿ ಮೌನ’

ಅಧಿಕಾರ ಹಂಚಿಕೆಯಲ್ಲೂ ಅಲಕ್ಷ್ಯ; ಸಿ.ಎಂ ಕುಟುಂಬದವರ ಮುಂದೆ ನಿಲ್ಲುವ ಸ್ಥಿತಿ, ಶಾಸಕರ ಅಳಲು
Last Updated 6 ಫೆಬ್ರುವರಿ 2020, 19:37 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿರುವುದು ಒಳ ಕುದಿತಕ್ಕೆ ಕಾರಣವಾಗಿದ್ದು, ಇದು ಯಾವುದೇ ಹಂತದಲ್ಲಿ ಯಾವುದೇ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ.

‘ಅರ್ಹರಾದ 10 ಶಾಸಕರನ್ನು ಸಂಪುಟಕ್ಕೆ ತೆಗೆದುಕೊಂಡ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ, ಉಳಿದಿರುವ ಮೂರು ಸ್ಥಾನಗಳನ್ನು ಮೂಲ ಬಿಜೆಪಿಯವರಿಗೆ ನೀಡದ ಮುಖ್ಯಮಂತ್ರಿವರ ನಡೆಯ ಬಗ್ಗೆ ಶಾಸಕರಲ್ಲಿ ಭ್ರಮ ನಿರಸನ ಉಂಟಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಮಾತ್ರವಲ್ಲ ನಿಗಮ–ಮಂಡಳಿ ಸೇರಿದಂತೆ ಇತರ ಎಲ್ಲ ಹುದ್ದೆಗಳಿಗೂ ನೇಮಕ ಮಾಡುವಾಗ ಮೂಲ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಲಾಗಿದೆ. ಅಲ್ಲದೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ, ಎಂ.ಪಿ.ರೇಣುಕಾಚಾರ್ಯ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಇವರೆಲ್ಲ ಮುಖ್ಯಮಂತ್ರಿ ಆಪ್ತರು ಎನ್ನುವುದಷ್ಟೇ ಅವರಿಗಿರುವ ಅರ್ಹತೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಅಧಿಕಾರ ನೀಡುವ ಮಾತು ಹಾಗಿರಲಿ, ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುವುದೂ ಕಷ್ಟವಾಗಿದೆ. ಮುಖ್ಯ
ಮಂತ್ರಿ ಗಮನ ಹರಿಸುತ್ತಿಲ್ಲ. ಅವರ ಕುಟುಂಬದವರ ಮುಂದೆ ಹೋಗಿ ನಿಂತುಕೊಳ್ಳುವ ಪರಿಸ್ಥಿತಿ ಬಂದಿದೆ’
ಎಂದರು.

ಮುಂದೊಂದು ದಿನ ಮಂತ್ರಿ: ಎಂ.ಟಿ ಬಿ.ನಾಗರಾಜ್‌ ಮಾತನಾಡಿ, ‘ಕೊಟ್ಟ ಮಾತು ಉಳಿಸಿಕೊಳ್ಳುವ ಗುಣ ಮುಖ್ಯಮಂತ್ರಿಯವರಿಗಿದೆ. ಮುಂದೊಂದು ದಿನ ನಾನೂ ಸಚಿವನಾಗುತ್ತೇನೆ ಎಂದರು.

ಗಾಜಿನ ಮನೆಯಲ್ಲಿ ಸಂಭ್ರಮ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಚಿವರಾಗಲು ಆರು ತಿಂಗಳ ಕಾಲ ವನವಾಸ ಅನುಭವಿಸಿದ್ದ ‘ಅರ್ಹ’ ಶಾಸಕರ ಕನಸು ಗುರುವಾರ ರಾಜ
ಭವನದಲ್ಲಿ ಈಡೇರಿತು.

ನೂತನ ಸಚಿವರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸಚಿವರ ಪ್ರಮಾಣ ವಚನ ಕಣ್ತುಂಬಿ
ಕೊಳ್ಳಲು ಅವರ ಅಭಿಮಾನಿಗಳು, ಕುಟುಂಬದವರು, ಆಪ್ತರು ಸೇರಿದ್ದರು.

ಸಚಿವರ ಕಲರವ: ಬಿ.ಸಿ.ಪಾಟೀಲ ಅವರ ‘ಕೌರವ ಮೀಸೆ’ ನೆರೆದವರ ಗಮನ ಸೆಳೆದರೆ, ರೇಷ್ಮೆ ಪಂಚೆ, ಶಲ್ಯ ತೊಟ್ಟಿದ್ದ ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು.ಡಾ.ಕೆ.ಸುಧಾಕರ್, ನಾರಾಯಣಗೌಡ, ಬೈರತಿ ಬಸವರಾಜ್ ಕೊರಳಲ್ಲಿದ್ದ ಕೇಸರಿ ಶಾಲು ಆಕರ್ಷಿಸಿತು. ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ಸಾಮಾನ್ಯ ಉಡುಪು ತೊಟ್ಟಿದ್ದರು. ಆದರೆ, ಬಿಜೆಪಿಯ ಬಹುತೇಕ ಕಾರ್ಯಕರ್ತರು ದೂರವೇ ಉಳಿದಿದ್ದರು.

8 ಮಂದಿ ಹೊಸಬರು: ಯಡಿಯೂರಪ್ಪ ಮಂತ್ರಿ ಮಂಡಲಕ್ಕೆ ಹೊಸದಾಗಿ 10 ಸಚಿವರು ಸೇರ್ಪಡೆಯಾಗಿದ್ದು, ಅವರಲ್ಲಿ 8 ಮಂದಿ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ತಂದೆ–ತಾಯಿ: ಬಸವೇಶ್ವರ, ತಂದೆ– ತಾಯಿ, ಕ್ಷೇತ್ರದ ಜನರ ಹೆಸರಿನಲ್ಲಿ ಬಿ.ಸಿ.ಪಾಟೀಲ, ತಂದೆ–ತಾಯಿ, ಕ್ಷೇತ್ರದ ಜನರ ಹೆಸರಿನಲ್ಲಿ ಶಿವರಾಮ ಹೆಬ್ಬಾರ್, ದೇವರು, ತಂದೆ–ತಾಯಿ ಹೆಸರಿನಲ್ಲಿ ಕೆ.ಗೋಪಾಲಯ್ಯ ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT