ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1.20ರೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ವಿರುದ್ಧ ಜೆಡಿಎಸ್–ಕಾಂಗ್ರೆಸ್ ಶಾಸಕರು ಕಿಡಿ ಕಾರಿದರು.
ವಿಧಾನಸಭೆಯಲ್ಲಿ ಶುಕ್ರವಾರ ಮೈತ್ರಿ ಸದಸ್ಯರು, ‘ರಾಜ್ಯಪಾಲರು ಬಿಜೆಪಿ ಪಕ್ಷಪಾತಿಯಂತೆ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಗೋ ಬ್ಯಾಕ್ ಗವರ್ನರ್’ ಎಂದೂ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ. ಅವರು ಹೀಗೆ ಸೂಚನೆ ನೀಡಬಹುದೇ. ಸಭಾಧ್ಯಕ್ಷರು ಮಾರ್ಗದರ್ಶನ ನೀಡಬೇಕು’ ಎಂದು ಕೋರಿದರು.
‘ಸಭಾನಾಯಕರೇ ವಿಶ್ವಾಸಮತದ ಪ್ರಸ್ತಾವ ಮಂಡಿಸಿದ್ದಾರೆ. ಹೀಗಾಗಿ, ಈ ನಿರ್ಣಯ ಸದನದ ಸ್ವತ್ತು. ಸದಸ್ಯರ ಹಕ್ಕು ಮೊಟಕು ಮಾಡುವುದು ಸರಿಯೇ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅರುಣಾಚಲ ಪ್ರದೇಶದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಉಲ್ಲೇಖಿಸಿದರು.
‘ರಾಜ್ಯಪಾಲರು ಕಾನೂನು ಚೌಕಟ್ಟು ಮೀರಿ ವರ್ತಿಸಬಾರದು. ನಿಮ್ಮ ಅಧಿಕಾರದ ಹಪಾಹಪಿಗಾಗಿ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಆಗುತ್ತಿದೆ’ ಎಂದು ಆರೋಪಿಸಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ‘ವಿಶ್ವಾಸಮತ ಮಂಡನೆಯ ಪ್ರಸ್ತಾವವನ್ನು ಮುಖ್ಯಮಂತ್ರಿ ಅವರೇ ಮಂಡಿಸಿದ್ದು, ಚರ್ಚೆ ನಡೆಯುತ್ತಿದೆ. ಈ ವೇಳೆ ಗಡುವು ನೀಡಲು ರಾಜ್ಯಪಾಲರಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ರೀ ರೀತಿ ಹೇಳಿರುವುದು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ’ ಎಂದರು.