ಕೆರಗೋಡು: ಅಹಾರ ಸಂರಕ್ಷಣೆ ಅಂತರರಾಷ್ಟ್ರೀಯ ಒಕ್ಕೂಟ (ಐಎಎಫ್ಪಿ) ಕೊಡಮಾಡುವ ಯುವ ಸಂಶೋಧಕ ಪ್ರಶಸ್ತಿಗೆ ಮಂಡ್ಯ ತಾಲ್ಲೂಕಿನ ಕೀಲಾರದ ಕೆ.ವಿ.ಶಿವರಾಮು ಆಯ್ಕೆಯಾಗಿದ್ದಾರೆ.
ಅವರು ಅಮೆರಿಕದ ಎನ್ಸಿ ವೆಟನರಿ ಮೆಡಸಿನ್ ಕಾಲೇಜಿನ ಜನಸಂಖ್ಯೆ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಆಗಿದ್ದು, ಪ್ರಶಸ್ತಿಯನ್ನು ಫ್ರಾನ್ಸ್ ಮೂಲದ ಕಂಪನಿ ಪ್ರಾಯೋಜಕತ್ವ ಮಾಡುತ್ತಿದೆ. ಪ್ರಶಸ್ತಿ ಮೊತ್ತ 10,000 ಯೂರೊ (₹8.56 ಲಕ್ಷ) ಆಗಿದೆ.
ಆಹಾರ ಭದ್ರತೆ ಮತ್ತು ಮೈಕ್ರೊ ಬ್ಯಾಕ್ಟೀರಿಯ ಕುರಿತ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಕೃಷಿ ವಿಜ್ಞಾನಿಯಾಗಿಯೂ ಗುರುತಿಸಿಕೊಂಡಿದ್ದು ಆಹಾರ ಜನ್ಯ ರೋಗಗಳ ಸಂಶೋಧನೆಯನ್ನೂ ಮಾಡುತ್ತಿರುವುದಾಗಿ ಶಿವರಾಮು ತಿಳಿಸಿದ್ದಾರೆ.