ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳೂ ಸೇರಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ಭಾಗಮಂಡಲ ಜಲಾವೃತಗೊಂಡಿದೆ. ಈ ವರ್ಷ ಮೊದಲ ಬಾರಿಗೆ ಭಾಗಮಂಡಲದ ಭಗಂಡೇಶ್ವರ ದೇಗುಲದ ಮೆಟ್ಟಿಲು ತನಕ ನೀರು ಬಂದಿದೆ. ನಾಪೋಕ್ಲು- ಅಯ್ಯಂಗೇರಿ- ಭಾಗಮಂಡಲದ ರಸ್ತೆಯ ಮೇಲೆ ಐದು ಐದು ಅಡಿಯಷ್ಟು ನೀರು ಬಂದಿದ್ದು ವಾಹನ ಸಂಚಾರ ಬಂದ್ ಆಗಿದೆ.
ಮಡಿಕೇರಿ,ಮಾದಾಪುರ, ಇಗ್ಗೋಡ್ಲು ಹಾಗೂ ಮುಕ್ಕೋಡ್ಲು ಭಾಗದಲ್ಲೂ ಮಳೆ ಆರ್ಭಟಿಸುತ್ತಿದ್ದು ಹಾರಂಗಿ ಒಳಹರಿವು ಏರಿಕೆ ಆಗಿದೆ.
ಇಂದು ರಜೆ ಘೋಷಣೆ:ಕೊಡಗು ಜಿಲ್ಲೆಯ ಮೂರು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ.