ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ದಿನಗೂಲಿ ಮಾಡಲು ಹೋಗಿದ್ದ ಹಲವು ಕಾರ್ಮಿಕರು ಕೊರೊನಾ ಭೀತಿಯಿಂದ ರಾಜ್ಯಕ್ಕೆ ಮರಳುತ್ತಿದ್ದಾರೆ. ಬಸ್ ಹಾಗೂ ಇತರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿರುವುದರಿಂದ ಇವರು ನಡೆದುಕೊಂಡೇ ಸಂಚರಿಸುತ್ತಿದ್ದಾರೆ. ಬೆಳಗಾವಿ ಮೂಲಕ ತಮ್ಮ ತಮ್ಮ ನಗರಗಳತ್ತ ಪ್ರಯಾಣ ಬೆಳೆಸಿದ್ದಾರೆ.
ಇಲ್ಲಿನ ಸಾಂಬ್ರಾ, ಮೋದಗಾ, ರಸ್ತೆಯ ಮೇಲೆ ಇಂತಹ ಹಲವು ಯುವಕರು ನಡೆದುಕೊಂಡು ಸಾಗುತ್ತಿರುವ ದೃಶ್ಯ ಶನಿವಾರ ಕಂಡುಬಂದಿತು. 3–4 ಜನರ ತಂಡವನ್ನು ಕಟ್ಟಿಕೊಂಡು, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸಾಗುತ್ತಿದ್ದರು.
ಮಹಾರಾಷ್ಟ್ರದ ಕರಾಡ, ಕೊಲ್ಹಾಪುರ ಹಾಗೂ ಗೋವಾದಿಂದ ಕಣಕುಂಬಿ, ಜಾಂಬೋಟಿ ಮಾರ್ಗದ ಮೂಲಕ ಇವರು ಆಗಮಿಸಿದ್ದಾರೆ. ರಸ್ತೆಯ ಅಕ್ಕಪಕ್ಕದ ಗ್ರಾಮಗಳ ಜನರಿಂದ ಕುಡಿಯುವ ನೀರು ಹಾಗೂ ತಿಂಡಿ, ಆಹಾರ ಪಡೆದು ಸೇವಿಸಿ, ಮುಂದೆ ಸಾಗಿದರು. ಇವರಲ್ಲಿ ಬಹುತೇಕರು ರಾಯಚೂರು, ಯಾದಗಿರಿ ಜಿಲ್ಲೆಯವರೆಂದು ಹೇಳಲಾಗುತ್ತಿದೆ.