ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಗೂಡಿನಲ್ಲಿ ಬಂಧಿಯಾದ ಚಿರತೆ

ಮೂರು ಕೋಳಿ ತಿಂದ ಚಿರತೆ* ಆರೋಗ್ಯ ತಪಾಸಣೆ ನಡೆಸಿ ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು
Last Updated 5 ಏಪ್ರಿಲ್ 2020, 14:15 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ಅರಸಿ ಕೊಂಡು ಬಂದ ಆರು ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ನಗರದ ಹೊರವಲಯದ ಸೂಲಿವಾರದಲ್ಲಿ ಕೋಳಿಗೂಡಿನಲ್ಲಿ ಭಾನುವಾರ ಮುಂಜಾನೆ ಬಂಧಿಯಾಗಿತ್ತು. ಚಿರತೆಯ ಆರೋಗ್ಯ ತಪಾಸಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಜನವಸತಿಯಿಂದ ದೂರವಿರುವ ಕಾಡಿಗೆ ಬಿಟ್ಟರು.

ಸೂಲಿವಾರದ ಜಯಲಕ್ಷ್ಮಮ್ಮ ಅವರ ತೋಟದ ಮನೆಯ ಪಕ್ಕದಲ್ಲಿದ್ದ ಕೋಳಿ ಗೂಡಿಗೆ ಭಾನುವಾರ ಮುಂಜಾನೆ ಚಿರತೆ ಬಂದು ಸೇರಿ ಕೊಂಡಿತ್ತು. ಕೋಳಿಗಳ ಆರ್ಭಟ ಕೇಳಿ ಮನೆಯವರು ಎಚ್ಚರಗೊಂಡಿದ್ದರು. ಕೋಳಿಗೂಡಿನಲ್ಲಿ ಚಿರತೆ ಸೇರಿ ಕೊಂಡಿದ್ದನ್ನು ಕಂಡು ಗಾಬರಿಯಾದ ಅವರು ಗೂಡಿನ ಬಾಗಿಲನ್ನು ಮುಚ್ಚಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್‌ ಹಾಗೂ ವಲಯ ಅರಣ್ಯ ಅಧಿಕಾರಿ ಗೋಪಾಲ್‌ ನೇತೃತ್ವದ ಅರಣ್ಯ ಇಲಾಖೆ ತಂಡ ಬೆಳಿಗ್ಗೆ 8 ಗಂಟೆ ವೇಳೆಗೆ ಸ್ಥಳಕ್ಕೆ ತಲುಪಿತ್ತು. ಬಳಿಕ ಅರಣ್ಯ ಅಧಿಕಾರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದ ವನ್ಯಜೀವಿ ತಜ್ಞ ಡಾ.ಉಮಾಶಂಕರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಅವರು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯ ಸ್ಮೃತಿ ತಪ್ಪಿಸಿದರು.

‘ಚಿರತೆ ಆರೋಗ್ಯವಾಗಿದೆ. ಗೂಡಿನಿಂದ ಹೊರಬರಲಾಗದೇ ಗಾಬರಿಗೊಂಡಿತ್ತು. ಅದನ್ನು ಮತ್ತೆ ಕಾಡಿಗೆ ಬಿಟ್ಟಿದ್ದೇವೆ’ ಎಂದು ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೂಲಿವಾರ ಪ್ರದೇಶವು ಬಸವನತಾರಾ ಮೀಸಲು ಅರಣ್ಯ, ತಿಪ್ಪಗೊಂಡನಹಳ್ಳಿಯಲ್ಲಿ ಜಲಮಂಡಳಿಯ ಅಧೀನದ ಕಾಡು ಪ್ರದೇಶ ಹಾಗೂ ಸಾವನದುರ್ಗ ಮೀಸಲು ಅರಣ್ಯಕ್ಕೆ ಸಮೀಪದಲ್ಲಿದೆ. ಹಾಗಾಗಿ ಇಲ್ಲಿ ಚಿರತೆಗಳ ಓಡಾಟ ಹೊಸದೇನಲ್ಲ. ಈ ಹಿಂದೆಯೂ ಅನೇಕ ಬಾರಿ ಚಿರತೆಗಳು ಕಾಣಿಸಿಕೊಂಡಿವೆ’ ಎಂದರು.

3 ಕೋಳಿ ತಿಂದ ಚಿರತೆ

‘ಗೂಡಿನಲ್ಲಿ ಸುಮಾರು 20ಕ್ಕೂ ಅಧಿಕ ಕೋಳಿಗಳಿದ್ದವು. ಅವುಗಳಲ್ಲಿ ಮೂರು ಕೋಳಿಗಳನ್ನು ಚಿರತೆ ತಿಂದಿದೆ. ಉಳಿದ ಕೋಳಿಗಳಿಗೆ ಯಾವುದೇ ಹಾನಿ ಮಾಡಿಲ್ಲ’ ಎಂದರು.

ಚಿರತೆ ನೋಡಲು ಜನಜಂಗುಳಿ: ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ಊರಿನ ಜನ ಕೋಳಿಗೂಡಿನ ಬಳಿ ಸೇರಿದ್ದರು.ಗೂಡಿನಿಂದ ಹೊರಬರಲಾಗದೇ ಚಡಪಡಿಸುತ್ತಿದ್ದ ಚಿರತೆಯ ಆರ್ಭಟ ಜೋರಾಗಿತ್ತು. ಕೋವಿಡ್ –19 ಸೋಂಕು ಹರಡುವ ಭೀತಿ ಇದ್ದುದರಿಂದ ತಾವರೆಕೆರೆ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜನ ಗುಂಪುಗೂಡದಂತೆ ತಡೆದೆವು’ ಎಂದು ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT