ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು, ಅಬ್ಬರ ತುಸು ಕಡಿಮೆಯಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮುಳುಗಡೆಯಾಗಿದ್ದ 6 ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನು ವಾರ 8.3 ಮಿ.ಮೀ. ಮಳೆಯಾಗಿದೆ. ಕಡಲ ಅಬ್ಬರವೂ ಹೆಚ್ಚಿದ್ದು, ತಾಲ್ಲೂಕಿನ ಉಳ್ಳಾಲ ಸಮೀಪದ ಉಚ್ಚಿಲದ ವಸಂತ ಮತ್ತು ಸೋಮೇಶ್ವರ ಮೋಹನ್ ಎಂಬುವರ ಮನೆಯಗಳು ಅಪಾಯದಂಚಿನಲ್ಲಿವೆ.
ಉಡುಪಿ ಜಿಲ್ಲೆಯಲ್ಲಿ ಹಲವು ದಿನ ಗಳಿಂದ ಅಬ್ಬರಿಸಿದ್ದ ಮಳೆ ಭಾನುವಾರ ಸ್ವಲ್ಪ ಬಿಡುವು ನೀಡಿತ್ತು. ಆಗಾಗ ಮಳೆ ಸುರಿದರೂ ಬಿರುಸಾಗಿರಲಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದೆ. ಕೊಪ್ಪ ಸುತ್ತಮುತ್ತ ಹದ ಮಳೆಯಾಗಿದೆ. ಎನ್.ಆರ್.ಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ತಗ್ಗಿದ್ದು ಸಾಧಾರಣ ಮಳೆಯಾಗಿದೆ.
ಮೈಸೂರಿನಲ್ಲಿ ಸಂಜೆ ಬಿರುಸಾಗಿ ಮಳೆ ಸುರಿಯಿತು. ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಚಿತ್ರದುರ್ಗ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಹೊಳಲ್ಕೆರೆ ಪಟ್ಟಣ ಹಾಗೂ ಸುತ್ತಮುತ್ತ ಬಿರುಸಿನ ಮಳೆ ಸುರಿಯಿತು.ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಲ್ಲಿ ಎರಡು ಗಂಟೆ ಕಾಲ ಬಿರುಸಾಗಿ ಮಳೆ ಸುರಿಯಿತು.
6 ಬ್ಯಾರೇಜ್ ಸಂಚಾರಕ್ಕೆ ಮುಕ್ತ
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕು ಗಳಲ್ಲಿ ಮುಳುಗಡೆಯಾಗಿದ್ದ ಎಲ್ಲ 6 ಬ್ಯಾರೇಜ್ಗಳೂ ಸಂಚಾರಕ್ಕೆ ಮುಕ್ತಗೊಂಡಿವೆ. ಚಿಕ್ಕೋಡಿ ತಾಲ್ಲೂಕಿನಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದ್ದ ನೀರಿನ ಪ್ರಮಾಣ 50ಸಾವಿರ ಕ್ಯುಸೆಕ್ಗೆ ಇಳಿಕೆಯಾಗಿದೆ.