ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವರಕ್ಷಕ ಔಷಧ ಉತ್ಪಾದನೆ ಕುಂಠಿತ: ಅದಾ ಯೊನಾಥ್

ಮನುಕುಲಕ್ಕೆ ಅಪಾಯ: ನೊಬೆಲ್ ಪುರಸ್ಕೃತ ವಿಜ್ಞಾನಿ ಅದಾ ಯೊನಾಥ್
Last Updated 4 ಜನವರಿ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಜೀವ ನಿರೋಧಕಗಳು ಬಹುಬೇಗ ತಮ್ಮ ಶಕ್ತಿ ಕಳೆದುಕೊಳ್ಳುತ್ತಿರುವುದರಿಂದ ಔಷಧ ಉತ್ಪಾದನಾ ಕಂಪನಿಗಳು ಹೊಸ, ಹೊಸ ಜೀವ ನಿರೋಧಕಗಳನ್ನು ಉತ್ಪಾದಿಸಲು ಹಿಂದೇಟು ಹಾಕುತ್ತಿವೆ. ಇದು ಅಪಾಯಕಾರಿಯಾಗಿ ಪರಿಣಮಿಸಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ,ಇಸ್ರೇಲ್‍ನ ಪ್ರೊ.ಅದಾ ಯೊನಾಥ್ ಹೇಳಿದರು.

ಇಲ್ಲಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ 107ನೇ ವಿಜ್ಞಾನ ಕಾಂಗ್ರೆಸ್‍ನ ಎರಡನೇ ದಿನವಾದ ಶನಿವಾರ ಉಪನ್ಯಾಸ ನೀಡಿದ ಅವರು, ‘ಪ್ರೊಟೀನ್‍ನಲ್ಲಿ ಡಿಎನ್‍ಎ ಅಡಕವಾಗಿರುತ್ತದೆ. ಇಂತಹ ಪ್ರೊಟೀನ್ ಉತ್ಪಾದಿಸುವ ಕಾರ್ಖಾನೆ ಎಂದರೆ ರೈಬೋಸೋಮ್. ಬ್ಯಾಕ್ಟೀರಿಯಾಗಳು ರೈಬೋಸೋಮ್ ಮೇಲೆಯೇ ದಾಳಿ ನಡೆಸುವುದರಿಂದ ಜೀವ ನಿರೋಧಕಗಳು ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ’ ಎಂದರು.

‘ಅಮೆರಿಕದಲ್ಲಿ ಪ್ರತಿವರ್ಷ 20 ಲಕ್ಷ ಜನರು ನಂಜಿನ ಕಾಯಿಲೆಗಳಿಂದ ಬಳಲುತ್ತಾರೆ. ಯೂರೋಪ್‍ನಲ್ಲಿ 2010-14ರ ನಡುವೆ ಇದೇ ಕಾರಣದಿಂದ 33 ಸಾವಿರ ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ನಿರ್ದಿಷ್ಟ ಜೀವ ನಿರೋಧಕಗಳ ಬಳಕೆ ದುಪ್ಪಟ್ಟಾಗಿದ್ದರೂ ಅದು ಪ್ರಯೋಜನಕ್ಕೆ ಬಂದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಎಂದರು.

‘ಆಫ್ರಿಕಾದಲ್ಲಿ ಜನರ ಸರಾಸರಿ ಜೀವಿತಾವಧಿ ತೀರಾ ಕಡಿಮೆ ಇದೆ. ಜನರು ಸರಾಸರಿ 70ರಿಂದ 80 ವರ್ಷ ಬದುಕಬೇಕು ಎಂಬ ಗುರಿ ನನ್ನದು. ಇದಕ್ಕಾಗಿ ಉಪಯುಕ್ತ ಜೀವ ನಿರೋಧಕಗಳ ಉತ್ಪಾದನೆ ಆಗಬೇಕಿದ್ದು, ಮುಂದಿನ ದಿನಗಳಲ್ಲಿ ಸಹ ಇದಕ್ಕಾಗಿ ಶೋಧನೆ ಮುಂದುವರಿಸುತ್ತೇನೆ’ ಎಂದು ಅವರು ತಿಳಿಸಿದರು.

ರಾಮಚಂದ್ರನ್ಸ್ಫೂರ್ತಿ

‘ಬೆಂಗಳೂರಿನ ಜಿ.ಎನ್.ರಾಮಚಂದ್ರನ್ ಅವರು ಪ್ರೊಟೀನ್‍ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಹಾನ್ ಸಾಧನೆ ಮಾಡಿದ್ದರು. ಕಂಪ್ಯೂಟರ್ ಬಳಕೆ ಇಲ್ಲದ ಸಮಯದಲ್ಲೇ ಅವರು ರೈಬೋಸೋಮ್‍ನ ಸಂಕೀರ್ಣ ರಚನೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು. ಅವರ ಪ್ರೇರಣೆಯಿಂದಲೇ ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವುದು ಸಾಧ್ಯವಾಯಿತು' ಎಂದು ಅದಾ ಯೊನಾಥ್ ಹೇಳಿದರು.

16ನೇ ವಯಸ್ಸಿನಲ್ಲಿಯೇ ಸಂಶೋಧನೆ

‘ನಾನು ಮನೆಯ ನನ್ನ ರೂಂನಲ್ಲಿ 16ನೇ ವಯಸ್ಸಿನಲ್ಲಿಯೇ ಸಂಶೋಧನೆಗೆ ಇಳಿದೆ. ಅದು ನನಗೆ ನೊಬೆಲ್ ಪ್ರಶಸ್ತಿ ಪಡೆಯಲು ರಹದಾರಿಯಾಯಿತು. ನೀವೀಗ ಆ ವಯಸ್ಸಿನ ಆಸುಪಾಸಿನಲ್ಲಿಯೇ ಇದ್ದೀರಿ. ಯಾವುದಕ್ಕೂ ಎದೆಗುಂದಬೇಡಿ. ವಿಜ್ಞಾನವನ್ನು ‍ಪ್ರೀತಿಸಿ. ನಿಮ್ಮನ್ನು ಅದು ಗಟ್ಟಿಗೊಳಿಸುತ್ತದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಇಸ್ರೇಲ್‍ನ ಪ್ರೊ.ಅದಾ ಯೊನಾಥ್ ಕಿವಿಮಾತು ಹೇಳಿದರು.

ಭಾರತ ಮೂಲದ ವೆಂಕಟರಾಮನ್ ರಾಮಕೃಷ್ಣನ್‌ ಅವರೊಂದಿಗೆ 2009ರಲ್ಲಿ ನೊಬೆಲ್ ಪ್ರಶಸ್ತಿ ಹಂಚಿಕೊಂಡಿರುವ ಅದಾ ಅವರು, ನೊಬೆಲ್‌ ಪ್ರಶಸ್ತಿ ಪಡೆದ ಇಸ್ರೇಲ್‌ನ ಮೊದಲ ಮಹಿಳೆ.

‘ನಾನು ಸಂಶೋಧನೆಗಳ ಪರಿಕರಗಳನ್ನು ತಾಯಿಯಿಂದ ಪಡೆದಿದ್ದೆ’ ಎಂದು ಹೇಳಿದ ಅವರು, ‘ತಮ್ಮ ತಂದೆಯ ಸಿಗರೇಟು ಚಟ ಬಿಡಿಸಲು ನಾವು ಮತ್ತೊಂದು ಸಂಶೋಧನೆ ಮಾಡಬೇಕಾಯಿತು’ ಎಂದು ತಿಳಿಸಿದರು.

‘ಅನ್ವೇಷಣೆಗೆ ಆಸಕ್ತಿ ಮುಖ್ಯ. ನಿಮ್ಮಲ್ಲಿ ಅದು ಎದ್ದುಕಾಣುತ್ತಿದೆ. ಮಕ್ಕಳೇ ವಿಜ್ಞಾನಕ್ಕೆ ವಿಪುಲ ಅವಕಾಶಗಳು ಇರುವ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ, ಬಳಸಿಕೊಳ್ಳಿ. ನಾನು ಸಾಕಷ್ಟು ವಿಷಯಗಳನ್ನು ಕೋಲ್ಕತ್ತ, ಬೆಂಗಳೂರು ಹಾಗೂ ದೆಹಲಿಯಲ್ಲಿ ಕಲಿತಿದ್ದೇನೆ. ನೀವು ಕಲಿಯಬೇಕು’ ಎಂಬ ಸಲಹೆ ನೀಡಿದರು.

***

ಪರಿಸರಸ್ನೇಹಿ ಜೀವ ನಿರೋಧಕ ಔಷಧಗಳ ಉತ್ಪಾದನೆಯತ್ತ ಈಗ ವಿಶೇಷ ಗಮನವನ್ನು ಹರಿಸಲೇಬೇಕಾಗಿದೆ

–ಪ್ರೊ.ಅದಾ ಯೊನಾಥ್, ನೊಬೆಲ್ ಪುರಸ್ಕೃತ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT