ಬೆಂಗಳೂರು:ಇದೇ ಮಂಗಳವಾರ (ಏ.30) ನಡೆಯಬೇಕಿದ್ದ ಕಾಂಗ್ರೆಸ್ನ ಸಮಾನ ಮನಸ್ಕ ಶಾಸಕರ ಸಭೆಯನ್ನು ಮುಂದೂಡಲಾಗಿದೆ.
ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮುಂದೂಡಿಕೆ ಆಗಿದೆ.
ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಈ ಸಭೆ ಕರೆದಿದ್ದರು. ನಾಲ್ಕೈದು ದಿನಗಳ ಬಳಿಕ ಸಭೆ ಕರೆಯಲು ಸೋಮಶೇಖರ್ ನಿರ್ಧರಿಸಿದ್ದಾರೆ.
ಉಪಚುನಾವಣೆ ಪ್ರಚಾರದಲ್ಲಿ ಎಲ್ಲ ಶಾಸಕರು ಕಾರ್ಯನಿರ್ವಹಿಸುವಂತೆ ಪಕ್ಷದ ನಾಯಕರು ಸೂಚನೆ ನೀಡಿದ್ದಾರೆ. ಹೀಗಾಗಿ ಮಂಗಳವಾರ ನಡೆಯಬೇಕಿದ್ದ ಸಭೆ ಮುಂದೂಡಲಾಗಿದೆ ಎಂದು ಗೊತ್ತಾಗಿದೆ.
ಸಭೆ ಕರೆದು ಸರ್ಕಾರದ ವಿರುದ್ಧ ತಿರುಗಿ ಬೀಳಲು ಸಮಾನ ಮನಸ್ಕ ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದರು ಎನ್ನಲಾಗಿದೆ. ಸಭೆ ಮುಂದೂಡಿಕೆ ಹಿನ್ನೆಲೆ ಸರ್ಕಾರಕ್ಕೆ ಎದುರಾಗಿದ್ದ ಸಂಕಷ್ಟ ತಾತ್ಕಾಲಿಕವಾಗಿ ದೂರವಾಗಿದೆ.