ತುಮಕೂರು: ಬಿಜೆಪಿಗೆ ಮತ ನೀಡಿದವರು ನಿಜವಾದ ಮುಸ್ಲಿಂ ಅಲ್ಲ ಎಂದು ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಕೋಮುವಾದಿಯಾಗಿದ್ದು, ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.
ಜಿನ್ನಾ ಸಂತತಿಯ ಜಮೀರ್ ಅಹ್ಮದ್ ಹೇಳಿಕೆಯಿಂದ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತದೆ. ದೇಶದಲ್ಲಿ ಏಕತೆ ಕಾಪಾಡಿಕೊಳ್ಳಲು ಇಂತಹ ಹೇಳಿಕೆಗೆ ಕಡಿವಾಣ ಹಾಕಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯ ಮಾಡಿದರು.
ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರ ಜೊತೆಗೆ ಹಿಂದು ಸಂಸ್ಕ್ರತಿಯನ್ನು ರಕ್ಷಿಸಬೇಕು. ಇಲ್ಲದೇ ಇದ್ದರೆ ನಾವು ಸಮುದ್ರದ ಪಾಲಾಗಬೇಕಾಗುತ್ತದೆ ಎಂದು ಹೇಳಿದರು.
ಶಾಸಕ ಬಸವನಗೌಡ ಪಾಟೀಲ್ ಅವರಿಗೆ ಜಮೀರ್ ಅಹ್ಮದ್ ಹೇಳಿಕೆಯ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಲವ್ ಜಿಹಾದ್ ನಾವು ಒಪ್ಪುವುದಿಲ್ಲ. ಇಂತಹ ಕೃತ್ಯ ನಡೆಸಲು ಮುಂದಾದಾಗ ಹತ್ತಾರು ಪ್ರಕರಣ ತಡೆದಿದ್ದೇವೆ ಎಂದು ಹೇಳಿದರು.
ಹಿಂದು ಮುಸ್ಲಿಮರು ಪ್ರೀತಿ ವಿಶ್ವಾಸದಿಂದ ಬದುಕಬೇಕು. ಅದನ್ನು ಮೀರಿ ಧಕ್ಕೆ ತರುವ ಕೆಲಸ ಮಾಡಬಾರದು. ಸಚಿವ ಜಮೀರ್ ಅಹ್ಮದ್ ಗೆ ಇದ್ಯಾವುದು ಗೊತ್ರಿಲ್ಲ. ಇಂತಹವರನ್ನು ಕಾಂಗ್ರೆಸ್ ಇನ್ನೂ ಸಚಿವ ಸ್ಥಾನದಲ್ಲಿ ಮುಂದುವರಿಸಿರುವುದು ಖಂಡನೀಯ ಎಂದು ಹರಿಹಾಯ್ದರು.
ಕಾಂಗ್ರೆಸ್ ನಾಯಕರು ಮಠ, ದೇವಸ್ಥಾನದ ಕಡೆ ಹೋಗ್ತಿದ್ದಾರೆ. ಕೆಟ್ಟಮೇಲೆ ಬುದ್ಧಿ ಬಂದಿದೆ. ನಾವು ಅಮರನಾಥ ಯಾತ್ರೆಗೆ ಹೋಗುವಾಗ ಕೋಮುವಾದಿಗಳು, ಜಾತಿವಾದಿಗಳು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ಈಗ ಅವರೇ ಅಮರನಾಥ ಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.