ಬೆಂಗಳೂರು: ಕೋವಿಡ್–19 ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಎಲ್ಲ ಸಚಿವರು, ಶಾಸಕರು, ಸಭಾಪತಿ ಮತ್ತು ಸಭಾಧ್ಯಕ್ಷರ ವೇತನ ಕಡಿತ ಹಾಗೈಊ ಕೆಲವು ಭತ್ಯೆಗಳಲ್ಲಿ ಶೇ 30ರಷ್ಟು ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ.
ಕೊರೊನಾ ತಡೆ ಕಾರ್ಯಾಚರಣೆಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಚುನಾಯಿತ ಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಈ ಕುರಿತು ಅಭಿಪ್ರಾಯ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿತ್ತು. ಇಲಾಖೆ ನೀಡಿದ ಅಭಿಪ್ರಾಯ ಆಧರಿಸಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ.
ಕರ್ನಾಟಕ ವಿಧಾನಮಂಡಲ ಸದಸ್ಯರ ವೇತನ, ಪಿಂಚಣಿ, ಮತ್ತು ಇತರ ಭತ್ಯೆಗಳ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ 2020 ರ ಉಪಬಂಧ ಅನುಸಾರ ಸಂಬಳ, ದೂರವಾಣಿ ವೆಚ್ಚ, ಚುನಾವಣಾ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ನಿಗದಿತ ವಿಮಾನ ಮತ್ತು ರೈಲ್ವೆ ಪ್ರಯಾಣ ಭತ್ಯೆ(ವಾರ್ಷಿಕ) ಇವುಗಳಲ್ಲಿ ಶೇ 30 ಕಡಿತ ಮಾಡಲಾಗುವುದು.
ಸಭೆಗಳಿಗೆ ಹಾಜರಾಗಲು ನೀಡುವ ದಿನಭತ್ಯೆ (ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ), ಪ್ರಯಾಣ ಭತ್ಯೆ, ವಾಹನ ಭತ್ಯೆ(ಪ್ರತಿ ಕಿ,ಮೀ.ಗೆ) ಇವುಗಳನ್ನು ಕಡಿತಗೊಳಿಸುವುದಿಲ್ಲ ಎಂದು ಆದೇಶ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.