ಮೈಸೂರು: ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾದ ಮೈಸೂರಿನ ಅಭಿಷೇಕ್ ಅವರ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನಡೆಸಲು ಪೋಷಕರು ಬಯಸಿದ್ದು, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಶನಿವಾರ ಇಲ್ಲಿ ತಿಳಿಸಿದರು.
ಇಲ್ಲಿನ ಕುವೆಂಪುನಗರದಲ್ಲಿರುವ ಅಭಿಷೇಕ್ ನಿವಾಸಕ್ಕೆ ತೆರಳಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಅಭಿಷೇಕ್ ತಂದೆ, ತಾಯಿ ಮತ್ತು ಸೋದರನಿಗೆ ವೀಸಾ ತೊಡಕು ಎದುರಾಗಿದ್ದು, ಆದಷ್ಟು ಶೀಘ್ರ ಪರಿಹರಿಸಲಾಗುವುದು’ ಎಂದರು.
‘ಅಮೆರಿಕದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಭಾರತೀಯರ ಮನಸ್ಥಿತಿಗೂ ವಿದೇಶಿಯರ ಮನಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಅಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಗುಂಡು ಹಾರಿಸುವ ಪ್ರವೃತ್ತಿ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಹೋಟೆಲ್ನ ಕೊಠಡಿ ಸ್ವಚ್ಛಗೊಳಿಸಲು ಅನುಮತಿ ಕೋರಿ, ಅಭಿಷೇಕ್ ಕೋಣೆಯೊಂದರ ಬಾಗಿಲು ಬಡಿದಾಗ ಒಳಗಿದ್ದ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಕುರಿತು ತನಿಖೆಯಾಗಬೇಕು’ ಎಂದು ಪ್ರತಾಪಸಿಂಹ ಆಗ್ರಹಿಸಿದರು.
ಈ ಮಧ್ಯೆ ಸಂಸದೆ ಶೋಭಾ ಕರಂದ್ಲಾಜೆ ಅವರು ಅಭಿಷೇಕ್ ಕುಟುಂಬದವರ ವೀಸಾ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ.