ಬೆಂಗಳೂರು: ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಇದುವರೆಗೆ ಇದ್ದ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಿಯಮವನ್ನು ರಾಜ್ಯ ಸರ್ಕಾರ ತೆಗೆದುಹಾಕಿದ್ದು, ಇನ್ನು 14 ದಿನಗಳ ಮನೆ ಕ್ವಾರಂಟೈನ್ ಮಾತ್ರ ಪೂರೈಸಿದರೆ ಸಾಕಾಗುತ್ತದೆ.
ಈ ನಿಯಮ ಮಹಾರಾಷ್ಟ್ರಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಮಹಾರಾಷ್ಟ್ರದಿಂದ ಬಂದವರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಪೂರೈಸಬೇಕು ಮತ್ತು ಮುಂದಿನ 7 ದಿನ ಮನೆ ಕ್ವಾರಂಟೈನ್ ಅನ್ನು ಪೂರೈಸಬೇಕಾಗುತ್ತದೆ.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಸೋಮವಾರ ಈ ಸಂಬಂಧ ನೂತನ ನಿಯಮಗಳನ್ನು ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬರುವವರು ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ ರಾಜ್ಯದ ಚೆಕ್ಪೋಸ್ಟ್ನಲ್ಲಿ ಅವರನ್ನು ಥರ್ಮಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜ್ವರದ ಲಕ್ಷಣ ಇಲ್ಲದಿದ್ದರೆ ಕೈಗೆ ಮೊಹರು ಹಾಕಿ ಮನೆ ಕ್ವಾರಂಟೈನ್ಗೆ ಕಳುಹಿಸಲಾಗುತ್ತದೆ.
ಹೀಗಾಗಿ ಜ್ವರದ ಲಕ್ಷಣ ಇಲ್ಲದವರು ಇನ್ನು ಮುಂದೆ 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗುವ ಅಗತ್ಯ ಇಲ್ಲ. ಜ್ವರದ ಲಕ್ಷಣ ಇದ್ದವರಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸುವುದು ಮತ್ತು ಆಸ್ಪತ್ರೆಗೆ ತೆರಳುವುದು ಕಡ್ಡಾಯ.