<p>ಮತ್ತೊಮ್ಮೆ ಯುಗಾದಿ ಬಂದಿದೆ. ಯುಗದ ಆದಿ, ಎಂದರೆ ಯುಗದ ಆರಂಭವೇ ಯುಗಾದಿ. ಯುಗ ಎಂದರೆ ಅದು ಒಂದು ವರ್ಷವೂ ಆಗಬಹುದು, ಒಂದು ಯುಗವೂ ಆಗಬಹುದು. ಯುಗದ ಕಲ್ಪನೆ ನಮಗೆ ಸುಲಭವಾಗಿ ಎಟುಕುವುದಿಲ್ಲ; ಆದುದರಿಂದ ಯುಗಾದಿಯನ್ನು ವರ್ಷಕ್ಕೆ ಸೀಮಿತಮಾಡಿಕೊಂಡಿದ್ದೇವೆ. ಹೀಗಾಗಿ ನಮಗೆ ವರ್ಷದ ಆರಂಭವೇ ಯುಗಾದಿ ಎನಿಸಿದೆ.</p>.<p>ನಾಮ–ರೂಪಗಳಿಲ್ಲದೆ ನಮ್ಮ ಅರಿವಿಗೆ ಯಾವುದೂ ನಿಲುಕದು. ನಾಮ ಎಂದರೆ ಹೆಸರು, ರೂಪ ಎಂದರೆ ಆಕಾರ. ಈ ಕಾರಣದಿಂದಲೇ ವರ್ಷಗಳಿಗೂ ಹೆಸರುಗಳನ್ನು ನೀಡಿದ್ದೇವೆ. ಇಂದಿನಿಂದ ಆರಂಭವಾಗಲಿರುವ ಹೊಸ ವರ್ಷದ ಹೆಸರು ‘ಶಾರ್ವರಿ‘. ‘ರಾತ್ರಿ’ ಎಂಬುದು ಅದರ ಅರ್ಥಗಳಲ್ಲಿ ಒಂದು. ಸದ್ಯ ಇಡಿಯ ಜಗತ್ತು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನೇ ಈ ಹೆಸರು ಧ್ವನಿಸುವಂತಿದೆ.</p>.<p>ರಾತ್ರಿ ಎಂದರೆ ಕತ್ತಲು. ಕತ್ತಲು ಎಂದರೆ ಭಯ. ಭಯ ಎಂದರೆ ಮಾನಸಿಕ ಒತ್ತಡ. ಅದರಿಂದ ನೆಮ್ಮದಿಯ ಹಾಳು. ನೆಮ್ಮದಿಯಿಲ್ಲದ ಜೀವನಕ್ಕೆ ಅರ್ಥವಾದರೂ ಏನಿದ್ದೀತು?</p>.<p>ಜಗತ್ತಿನಾದ್ಯಂತ ಇಂದು ಕೊರೋನಾ ವೈರಸ್ನಿಂದಾಗಿ ಕತ್ತಲು ಆವರಿಸಿದೆ, ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ‘ಶಾರ್ವರಿ‘ಯ ಆಗಮನವಾಗಿದೆ. ಯುಗಾದಿಯ ಹಬ್ಬ ಈ ವರ್ಷ ಆತಂಕದ ಕಾಲವಾಗಿದೆ, ದಿಟ. ಆದರೆ ನಾವು ಈಗಿನ ಪರಿಸ್ಥಿತಿಯಿಂದ ಕಂಗಾಲಾಗಬೇಕಿಲ್ಲ. ಈ ಸಂದೇಶವನ್ನು ಯುಗಾದಿಪರ್ವದ ತಾತ್ವಿಕತೆಯೇ ಹೇಳುತ್ತಿದೆ.</p>.<p>ಯುಗಾದಿಗೆ ರೂಪವೂ ಇದೆ. ಅದೇ ನಾವು ಆಚರಿಸುವ ವಿಧಿ–ವಿಧಾನಗಳು. ಯುಗಾದಿಹಬ್ಬದ ಆಚರಣೆಗಳಲ್ಲಿ ಪ್ರಮುಖವಾದುದು ಬೇವು–ಬೆಲ್ಲಗಳ ಸೇವನೆ. ಜೀವನದಲ್ಲಿ ಬೆಲ್ಲ, ಎಂದರೆ ಸಿಹಿ ಮಾತ್ರವೇ ಇರದು; ಬೇವು, ಕಹಿಯೂ ಇರುತ್ತದೆ. ಜೀವನದಲ್ಲಿ ಎರಡನ್ನೂ ಸ್ವೀಕರಿಸುವ ಧೈರ್ಯವನ್ನು ದಕ್ಕಿಸಿಕೊಳ್ಳಬೇಕು ಎಂಬುದೇ ಈ ಹಬ್ಬದ ದಿಟವಾದ ಆಶಯ. ಇದೇ ನೂತನ ವರ್ಷದ ಸಂಭ್ರಮದಲ್ಲಿ ನಾವು ಅಂತರಂಗದಲ್ಲಿ ಧರಿಸಬೇಕಾದ ಹೊಸ ‘ಬಟ್ಟೆ’.</p>.<p>ರಾತ್ರಿ ಬಂದಿದೆ; ಕತ್ತಲು ಕವಿದಿದೆ, ನಿಜ. ಅದರೆ ಕಾಲಚಕ್ರ ಅಲ್ಲಿಗೇ ನಿಲ್ಲದು; ರಾತ್ರಿ ಆದಮೇಲೆ ಬೆಳಕು ಮೂಡಲೇಬೇಕು. ಇದೇ ಸೃಷ್ಟಿಧರ್ಮ. ‘ಅಗೋ! ಅಲ್ಲಿ ನೋಡು ಕತ್ತಲೆಯು ಬೆಳಕಿಗೆ ಜನ್ಮವನ್ನು ನೀಡುತ್ತಿದೆ‘ ಎಂದು ಉದ್ಗರಿಸಿದ್ದಾನೆ, ಖಲೀಲ್ ಗಿಬ್ರಾನ್. ಹೌದು, ಕತ್ತಲೆಯಲ್ಲಿ ಬೆಳಕೂ ಅಡಗಿದೆ, ಬೆಳಕಿನಲ್ಲಿ ಕತ್ತಲೂ ಕುಳಿತಿದೆ. ಈ ಕಾಣ್ಕೆಯನ್ನು ಅನುಸಂಧಾನಿಸುವುದೇ ಈ ಯುಗಾದಿಯ ಆಚರಣೆ. ಎಂದರೆ ಸಿಹಿ ಇದ್ದಾಗ ಹಿಗ್ಗುವುದೂ, ಕಹಿ ಇದ್ದಾಗ ಕುಗ್ಗುವುದೂ ಸಲ್ಲದು; ಎರಡೂ ಚಕ್ರದಂತೆ ನಿರಂತರ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಯುಗಾದಿ. ಈ ಸಂದೇಶವನ್ನು ಪ್ರಕೃತಿಯಲ್ಲಿಯೇ ಕಾಣಬಹುದಾಗಿದೆ.</p>.<p>ಮೊನ್ನೆಯವರೆಗೂ ಎಲೆ–ಹೂವು–ಕಾಯಿ–ಹಣ್ಣುಗಳಿಂದ ತುಂಬಿದ್ದ ಮರ ನೆನ್ನೆ ಬೆತ್ತಲಾಗಿ ಅದರ ಸೌಂದರ್ಯವನ್ನು ಕಳೆದುಕೊಂಡಿತ್ತು; ಆದರೆ ಇಂದು ಮತ್ತೆ ಅದು ನಳನಳಿಸುತ್ತಿದೆ. ನಮ್ಮ ಜೀವನವೂ ಹೀಗೆಯೇ. ಸುಖ–ದುಃಖ, ಬೆಳಕು–ಕತ್ತಲು, ರಾತ್ರಿ–ಹಗಲು – ಇವುಗಳಲ್ಲಿ ಯಾವುದೋ ಒಂದು ಮಾತ್ರವೇ ಇರದು; ಒಂದರಲ್ಲಿ ಇನ್ನೊಂದು ಅಡಗಿರುತ್ತದೆ. ಹೀಗಾಗಿ ನಾವು ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಯುಗಾದಿಯ ದಿಟವಾದ ಹೋಳಿಗೆ.</p>.<p>ಹೌದು, ಮನೆಬಾಗಿಲಿಗೆ ತೋರಣ ವನ್ನು ಕಟ್ಟಿ, ಪಾಯಸ–ಹೋಳಿಗೆ ಗಳನ್ನು ಸವಿದು, ಬಂಧುಮಿತ್ರರೊಂದಿಗೆ ಸಂತಸದಿಂದ ನಲಿಯುವ ವಾತಾವರಣ ಈ ವರ್ಷ ಇಲ್ಲದಿರಬಹುದು. ಆದರೆ ಪ್ರಕೃತಿಮಾತೆ ತನ್ನ ಒಡಲನ್ನು ಹಸಿರಿನಿಂದ ಅಲಂಕರಿಸಿಕೊಂಡಿದ್ದಾಳೆ; ಅದನ್ನು ಮನೆಯ ಕಿಟಕಿಯಿಂದಲೇ ನೋಡಿ ಮನಸ್ಸನ್ನು ತುಂಬಿಸಿಕೊಳ್ಳೋಣ. ನಮ್ಮ ಮನೆಯ ಮುಂದಿರುವ ಮರದ ರೆಂಬೆ–ಕೊಂಬೆಗಳೇ ಯುಗಾದಿಯ ತೋರಣ; ಹಕ್ಕಿಗಳ ಉಲಿಯೇ ಹಬ್ಬದ ಸಂಭ್ರಮ; ಧೈರ್ಯವೇ ನಮ್ಮ ಬಂಧು–ಮಿತ್ರರು; ಎಲ್ಲರ ಒಳಿತಿಗಾಗಿ ನಾವು ಸಂಯಮದಿಂದ ನಡೆದುಕೊಳ್ಳುವುದೇ ದೇವಸ್ಥಾನದಲ್ಲಿ ಸಲ್ಲಿಸುವ ಪೂಜೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮತ್ತೊಮ್ಮೆ ಯುಗಾದಿ ಬಂದಿದೆ. ಯುಗದ ಆದಿ, ಎಂದರೆ ಯುಗದ ಆರಂಭವೇ ಯುಗಾದಿ. ಯುಗ ಎಂದರೆ ಅದು ಒಂದು ವರ್ಷವೂ ಆಗಬಹುದು, ಒಂದು ಯುಗವೂ ಆಗಬಹುದು. ಯುಗದ ಕಲ್ಪನೆ ನಮಗೆ ಸುಲಭವಾಗಿ ಎಟುಕುವುದಿಲ್ಲ; ಆದುದರಿಂದ ಯುಗಾದಿಯನ್ನು ವರ್ಷಕ್ಕೆ ಸೀಮಿತಮಾಡಿಕೊಂಡಿದ್ದೇವೆ. ಹೀಗಾಗಿ ನಮಗೆ ವರ್ಷದ ಆರಂಭವೇ ಯುಗಾದಿ ಎನಿಸಿದೆ.</p>.<p>ನಾಮ–ರೂಪಗಳಿಲ್ಲದೆ ನಮ್ಮ ಅರಿವಿಗೆ ಯಾವುದೂ ನಿಲುಕದು. ನಾಮ ಎಂದರೆ ಹೆಸರು, ರೂಪ ಎಂದರೆ ಆಕಾರ. ಈ ಕಾರಣದಿಂದಲೇ ವರ್ಷಗಳಿಗೂ ಹೆಸರುಗಳನ್ನು ನೀಡಿದ್ದೇವೆ. ಇಂದಿನಿಂದ ಆರಂಭವಾಗಲಿರುವ ಹೊಸ ವರ್ಷದ ಹೆಸರು ‘ಶಾರ್ವರಿ‘. ‘ರಾತ್ರಿ’ ಎಂಬುದು ಅದರ ಅರ್ಥಗಳಲ್ಲಿ ಒಂದು. ಸದ್ಯ ಇಡಿಯ ಜಗತ್ತು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನೇ ಈ ಹೆಸರು ಧ್ವನಿಸುವಂತಿದೆ.</p>.<p>ರಾತ್ರಿ ಎಂದರೆ ಕತ್ತಲು. ಕತ್ತಲು ಎಂದರೆ ಭಯ. ಭಯ ಎಂದರೆ ಮಾನಸಿಕ ಒತ್ತಡ. ಅದರಿಂದ ನೆಮ್ಮದಿಯ ಹಾಳು. ನೆಮ್ಮದಿಯಿಲ್ಲದ ಜೀವನಕ್ಕೆ ಅರ್ಥವಾದರೂ ಏನಿದ್ದೀತು?</p>.<p>ಜಗತ್ತಿನಾದ್ಯಂತ ಇಂದು ಕೊರೋನಾ ವೈರಸ್ನಿಂದಾಗಿ ಕತ್ತಲು ಆವರಿಸಿದೆ, ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ‘ಶಾರ್ವರಿ‘ಯ ಆಗಮನವಾಗಿದೆ. ಯುಗಾದಿಯ ಹಬ್ಬ ಈ ವರ್ಷ ಆತಂಕದ ಕಾಲವಾಗಿದೆ, ದಿಟ. ಆದರೆ ನಾವು ಈಗಿನ ಪರಿಸ್ಥಿತಿಯಿಂದ ಕಂಗಾಲಾಗಬೇಕಿಲ್ಲ. ಈ ಸಂದೇಶವನ್ನು ಯುಗಾದಿಪರ್ವದ ತಾತ್ವಿಕತೆಯೇ ಹೇಳುತ್ತಿದೆ.</p>.<p>ಯುಗಾದಿಗೆ ರೂಪವೂ ಇದೆ. ಅದೇ ನಾವು ಆಚರಿಸುವ ವಿಧಿ–ವಿಧಾನಗಳು. ಯುಗಾದಿಹಬ್ಬದ ಆಚರಣೆಗಳಲ್ಲಿ ಪ್ರಮುಖವಾದುದು ಬೇವು–ಬೆಲ್ಲಗಳ ಸೇವನೆ. ಜೀವನದಲ್ಲಿ ಬೆಲ್ಲ, ಎಂದರೆ ಸಿಹಿ ಮಾತ್ರವೇ ಇರದು; ಬೇವು, ಕಹಿಯೂ ಇರುತ್ತದೆ. ಜೀವನದಲ್ಲಿ ಎರಡನ್ನೂ ಸ್ವೀಕರಿಸುವ ಧೈರ್ಯವನ್ನು ದಕ್ಕಿಸಿಕೊಳ್ಳಬೇಕು ಎಂಬುದೇ ಈ ಹಬ್ಬದ ದಿಟವಾದ ಆಶಯ. ಇದೇ ನೂತನ ವರ್ಷದ ಸಂಭ್ರಮದಲ್ಲಿ ನಾವು ಅಂತರಂಗದಲ್ಲಿ ಧರಿಸಬೇಕಾದ ಹೊಸ ‘ಬಟ್ಟೆ’.</p>.<p>ರಾತ್ರಿ ಬಂದಿದೆ; ಕತ್ತಲು ಕವಿದಿದೆ, ನಿಜ. ಅದರೆ ಕಾಲಚಕ್ರ ಅಲ್ಲಿಗೇ ನಿಲ್ಲದು; ರಾತ್ರಿ ಆದಮೇಲೆ ಬೆಳಕು ಮೂಡಲೇಬೇಕು. ಇದೇ ಸೃಷ್ಟಿಧರ್ಮ. ‘ಅಗೋ! ಅಲ್ಲಿ ನೋಡು ಕತ್ತಲೆಯು ಬೆಳಕಿಗೆ ಜನ್ಮವನ್ನು ನೀಡುತ್ತಿದೆ‘ ಎಂದು ಉದ್ಗರಿಸಿದ್ದಾನೆ, ಖಲೀಲ್ ಗಿಬ್ರಾನ್. ಹೌದು, ಕತ್ತಲೆಯಲ್ಲಿ ಬೆಳಕೂ ಅಡಗಿದೆ, ಬೆಳಕಿನಲ್ಲಿ ಕತ್ತಲೂ ಕುಳಿತಿದೆ. ಈ ಕಾಣ್ಕೆಯನ್ನು ಅನುಸಂಧಾನಿಸುವುದೇ ಈ ಯುಗಾದಿಯ ಆಚರಣೆ. ಎಂದರೆ ಸಿಹಿ ಇದ್ದಾಗ ಹಿಗ್ಗುವುದೂ, ಕಹಿ ಇದ್ದಾಗ ಕುಗ್ಗುವುದೂ ಸಲ್ಲದು; ಎರಡೂ ಚಕ್ರದಂತೆ ನಿರಂತರ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಯುಗಾದಿ. ಈ ಸಂದೇಶವನ್ನು ಪ್ರಕೃತಿಯಲ್ಲಿಯೇ ಕಾಣಬಹುದಾಗಿದೆ.</p>.<p>ಮೊನ್ನೆಯವರೆಗೂ ಎಲೆ–ಹೂವು–ಕಾಯಿ–ಹಣ್ಣುಗಳಿಂದ ತುಂಬಿದ್ದ ಮರ ನೆನ್ನೆ ಬೆತ್ತಲಾಗಿ ಅದರ ಸೌಂದರ್ಯವನ್ನು ಕಳೆದುಕೊಂಡಿತ್ತು; ಆದರೆ ಇಂದು ಮತ್ತೆ ಅದು ನಳನಳಿಸುತ್ತಿದೆ. ನಮ್ಮ ಜೀವನವೂ ಹೀಗೆಯೇ. ಸುಖ–ದುಃಖ, ಬೆಳಕು–ಕತ್ತಲು, ರಾತ್ರಿ–ಹಗಲು – ಇವುಗಳಲ್ಲಿ ಯಾವುದೋ ಒಂದು ಮಾತ್ರವೇ ಇರದು; ಒಂದರಲ್ಲಿ ಇನ್ನೊಂದು ಅಡಗಿರುತ್ತದೆ. ಹೀಗಾಗಿ ನಾವು ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಯುಗಾದಿಯ ದಿಟವಾದ ಹೋಳಿಗೆ.</p>.<p>ಹೌದು, ಮನೆಬಾಗಿಲಿಗೆ ತೋರಣ ವನ್ನು ಕಟ್ಟಿ, ಪಾಯಸ–ಹೋಳಿಗೆ ಗಳನ್ನು ಸವಿದು, ಬಂಧುಮಿತ್ರರೊಂದಿಗೆ ಸಂತಸದಿಂದ ನಲಿಯುವ ವಾತಾವರಣ ಈ ವರ್ಷ ಇಲ್ಲದಿರಬಹುದು. ಆದರೆ ಪ್ರಕೃತಿಮಾತೆ ತನ್ನ ಒಡಲನ್ನು ಹಸಿರಿನಿಂದ ಅಲಂಕರಿಸಿಕೊಂಡಿದ್ದಾಳೆ; ಅದನ್ನು ಮನೆಯ ಕಿಟಕಿಯಿಂದಲೇ ನೋಡಿ ಮನಸ್ಸನ್ನು ತುಂಬಿಸಿಕೊಳ್ಳೋಣ. ನಮ್ಮ ಮನೆಯ ಮುಂದಿರುವ ಮರದ ರೆಂಬೆ–ಕೊಂಬೆಗಳೇ ಯುಗಾದಿಯ ತೋರಣ; ಹಕ್ಕಿಗಳ ಉಲಿಯೇ ಹಬ್ಬದ ಸಂಭ್ರಮ; ಧೈರ್ಯವೇ ನಮ್ಮ ಬಂಧು–ಮಿತ್ರರು; ಎಲ್ಲರ ಒಳಿತಿಗಾಗಿ ನಾವು ಸಂಯಮದಿಂದ ನಡೆದುಕೊಳ್ಳುವುದೇ ದೇವಸ್ಥಾನದಲ್ಲಿ ಸಲ್ಲಿಸುವ ಪೂಜೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>