ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಾಮಗ್ರಿಗಳನ್ನು ಹೊರತುಪಡಿಸಿ, ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ ಇರುವ ಇತರ ಸಾಮಗ್ರಿಗಳನ್ನು ಖರೀದಿಸುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಇತರ ಸಾಮಗ್ರಿಗಳ ಖರೀದಿಗೆ ಕಡ್ಡಾಯ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ ಮೇಲೂ ಅಂತಹ ಒತ್ತಾಯ ಮಾಡುತ್ತಿರುವ, ಅಧಿಕ ಬೆಲೆಗೆ ಮಾರುತ್ತಿರುವ ದೂರು ಇಲಾಖೆಗೆ ಬಂದಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ ಎಂದುಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ನ್ಯಾಯಬೆಲೆಅಂಗಡಿಗಳಲ್ಲಿ ಇತರ ಸಾಮಗ್ರಿ ಖರೀದಿ ಕಡ್ಡಾಯವಲ್ಲ ಎಂಬ ಭಿತ್ತಿಪತ್ರ ಅಳವಡಿಸಬೇಕು. ಸಾಮಗ್ರಿಗಳಿಗೆ ವಾಸ್ತವ ಬೆಲೆಯನ್ನು ಮಾತ್ರ ಪಡೆಯಬೇಕು, ಅದಕ್ಕೆ ರಶೀತಿಯನ್ನೂ ನೀಡಬೇಕು. ಇಂತಹ ನಿಯಮ ಪಾಲಿಸದವರ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.