ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆಗುಂಪಾದರೇ ಮೂಲ ಕಾಂಗ್ರೆಸಿಗರು?

ಮೌನಕ್ಕೆ ಜಾರಿದ ಹಿರಿಯ ಮುಖಂಡರು, ಬೇಸರದಿಂದ ಅಂತರ ಕಾಯ್ದುಕೊಂಡು ನೇಪತ್ಯಕ್ಕೆ ಸರಿದ ನಾಯಕರ ಪುತ್ರರು
Last Updated 5 ಮೇ 2018, 10:25 IST
ಅಕ್ಷರ ಗಾತ್ರ

ಗೌರಿಬಿದನೂರು: ಮೈಸೂರು ಕಾಂಗ್ರೆಸ್‌ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ಧ್ವಜಾರೋಹಣ ಸತ್ಯಾಗ್ರಹ ನಡೆಸಲು ಕೈಗೊಂಡ ತೀರ್ಮಾನ ಭಾರತದ ಚರಿತ್ರೆಯಲ್ಲಿ ಕರ್ನಾಟಕದ ಜಲಿಯನ್‌ ವಾಲಾಬಾಗ್‌ ದುರಂತಕ್ಕೆ ಕಾರಣವಾಯಿತು. ಅಂದಿನಿಂದಲೂ ಗೌರಿಬಿದನೂರಿಗೂ ಕಾಂಗ್ರೆಸ್‌ಗೆ ಅವಿನಾಭಾವ ನಂಟು ಬೆಳೆದುಕೊಂಡು ಬಂದಿದೆ.

ಹೀಗಾಗಿ ಈ ಕ್ಷೇತ್ರದ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ತನ್ನದೇ ಸ್ಥಾನ ಪಡೆದುಕೊಂಡಿದೆ. ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಈವರೆಗಿನ ನಡೆದ 14 ಚುನಾವಣೆಗಳಲ್ಲಿ ಅರ್ಧದಷ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಸತತ 20 ವರ್ಷಗಳಿಂದ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿ ಬದಲಾಗಿದೆ.

ಆದರೆ ದಿನೇ ದಿನೇ ಕಾಂಗ್ರೆಸ್ ಚುಕ್ಕಾಣಿಯನ್ನು ಕೆಲವರೇ ತಮ್ಮ ಕೈಗೆ ತೆಗೆದುಕೊಂಡು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪಾಗಿಸಿದ್ದಾರೆ ಎಂಬ ಆರೋಪವೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಅನೇಕ ಕಾಂಗ್ರೆಸ್ ಮುಖಂಡರು ನೇಪಥ್ಯಕ್ಕೆ ಸರಿದದ್ದು ಗೋಚರಿಸುತ್ತದೆ.

1973 ರಲ್ಲಿ ಒಂದು ಬಾರಿ ಶಾಸಕರಾಗಿ, ನಂತರ ಸತತವಾಗಿ ಮೂರು ಬಾರಿ ಸಂಸದರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಈ ಭಾಗದ ನಾಯಕರಿಗೆ ರಾಜಕೀಯ ಗುರುವಾಗಿದ್ದ ವಿ.ಕೃಷ್ಣರಾವ್ ಅವರ ಪುತ್ರರಾದ ಕೆ.ನಾಗಭೂಷಣರಾವ್ ಮತ್ತು ವೆಂಕಟರವಣಪ್ಪ ಅವರಿಗೆ ಇವತ್ತು ಕಾಂಗ್ರೆಸ್ ಪಕ್ಷದಲ್ಲಿಯೇ ನೆಲೆ ಇಲ್ಲದಂತಾಗಿದೆ ಎನ್ನುವುದು ಅನೇಕರ ವಾದವಾಗಿದೆ.

ಗೊಟಕನಾಪುರದ ಹಿಂದೂ ಸಾದರ ಸಮುದಾಯದ ಹಿರಿಯ ಮುಖಂಡ ಜಿ.ವಿ.ಕೃಷ್ಣಮೂರ್ತಿ ಅವರು ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರು. ಒಂದು ಬಾರಿ ಶಾಸಕರಾಗಿ ತಾಲ್ಲೂಕಿನ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಆದರೆ ಅವರ ಪುತ್ರರಿಗೆ ಕಾಂಗ್ರೆಸ್‌ನಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎನ್ನುವುದು ಅವರ ಬೆಂಬಲಿಗರ ಅಳಲು.

ಕೃಷ್ಣಮೂರ್ತಿ ಅವರ ಪುತ್ರರಾದ ಜಿ.ಕೆ.ಸತೀಶ್ ಕುಮಾರ್ ಕಾಂಗ್ರೆಸ್ ತಾಲ್ಲೂಕು ಘಟಕ ಅಧ್ಯಕ್ಷರಾಗಿ ಮತ್ತು ಜಿ.ಕೆ.ರಮೇಶ್ ಕುಮಾರ್ ಅವಿಭಜಿತ ಕೋಲಾರ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದವರು. ಆದರೆ ಇಂದು ಅವರು ಪಕ್ಷದಲ್ಲಿ ನೆಲೆ ಕಳೆದುಕೊಂಡು, ಬೇಸರದಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೇ ಬೇಸರ ವ್ಯಕ್ತಪಡಿಸುತ್ತಾರೆ.

ಈ ಕುರಿತು ಜಿ.ಕೆ.ಸತೀಶ್ ಕುಮಾರ್ ಅವರನ್ನು ಕೇಳಿದರೆ, ‘ಕಳೆದ ಒಂದು ದಶಕದಿಂದ ಸ್ಥಳೀಯ ಶಾಸಕರು ಹೊಸಬರಿಗೆ ಪಕ್ಷದಲ್ಲಿ ಸ್ಥಾನ ಮಾನ ನೀಡುವ ಮೂಲಕ ದಶಕಗಳ ಕಾಲ ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸಿದ್ದಾರೆ’ ಎಂದು ಆರೋಪಿಸುತ್ತಾರೆ.

1978 ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ತೊಂಡೇಬಾವಿ ಹೋಬಳಿ ಬಂದಾರ್ಲಹಳ್ಳಿಯ ಬಿ.ಎನ್.ಕೆ.ಪಾಪಯ್ಯ ಅವರ ಕುಟುಂಬದವರು ಪಕ್ಷದಲ್ಲಿದ್ದರೂ ಕೂಡ ಸಕ್ರಿಯ ಭಾಗವಹಿಸುವಿಕೆ ತುಂಬಾ ಕಡಿಮೆ ಇದೆ. ವಿ.ಕೃಷ್ಣರಾವ್ ಅವರ ಆಪ್ತವಲಯದಲ್ಲಿ ಗುರ್ತಿಸಿಕೊಂಡಿದ್ದ ಶಾಸಕ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ಅವರ ಕಿರಿಯ ಪುತ್ರ ಶ್ರೀನಿವಾಸರೆಡ್ಡಿ ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದೇ ದೊಡ್ಡ ಸಾಧನೆ. ಸದ್ಯ ಆ ಕುಟುಂಬದವರು ಯಾರೂ ಪಕ್ಷದಲ್ಲಿ ಉಳಿದಿಲ್ಲ.

ಮಂಚೇನಹಳ್ಳಿ ಹೋಬಳಿಯ ಕಂಬತ್ತನಹಳ್ಳಿ ಶಾಸಕ ಕೆ.ಎಚ್.ವೆಂಕಟರೆಡ್ಡಿ ಅವರ ಪುತ್ರ ಕೆ.ವಿ.ಹನುಮಪ್ಪರೆಡ್ಡಿ ಅವರು ಕಾಂಗ್ರೆಸ್ ಮುಖಂಡರ ವರ್ತನೆಗೆ ಬೇಸತ್ತು ಪಕ್ಷವನ್ನೇ ತೊರೆದು ಬಿಜೆಪಿ ಸೇರಿದರು. ಆರ್ಯವೈಶ್ಯ ಸಮುದಾಯದ ಹಿರಿಯ ಮುಖಂಡ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಇಸ್ತೂರಿ ಸುಬ್ಬಯ್ಯ ಶೆಟ್ಟಿ ಅವರ ಇಬ್ಬರು ಮಕ್ಕಳು ಪಕ್ಷದಲ್ಲಿ ಗುರುತಿಸಿಕೊಂಡರೂ ಯಾವುದೇ ಸ್ಥಾನಮಾನಗಳಿಲ್ಲದೆ ಆಟಕ್ಕುಂಟು ಲೆಕ್ಕಕ್ಕಿಲ್ಲದವರಂತಾಗಿದ್ದಾರೆ ಎಂದು ಅವರ ಆಪ್ತರು ನೊಂದು ಹೇಳುತ್ತಾರೆ.

ಪಕ್ಷದ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿದ್ದ ಹನುಮಂತಯ್ಯಶೆಟ್ಟಿ ಅವರ ಪುತ್ರ ಕಮಲಾಕರ್ ಸ್ಥಿತಿ ಸದ್ಯ ಪಕ್ಷದಲ್ಲಿ ಅತಂತ್ರವಾಗಿದೆ. ನಗರಗೆರೆ ಹೋಬಳಿ ಮೇಳ್ಯಾ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಪಿ.ಒ.ನಾರಾಯಣಚಾರ್ ಅವರ ಪುತ್ರ ಎಂ.ಎನ್.ರಾಧಾಕೃಷ್ಣ ಅವರು ಪಕ್ಷದಲ್ಲಿ ಗುರುತಿಸಿಕೊಳ್ಳಲು ಎರಡು ದಶಕಗಳಿಂದ ಹೆಣಗಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ದೇವರಾಜು ಅರಸು ಆಡಳಿತಾವಧಿಯಲ್ಲಿ ರಾಜ್ಯ ಕ್ರೀಡಾ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಿರಿಯ ಮುಖಂಡ ದೊಡ್ಡಕುರುಗೋಡು ಡಿ.ಎಸ್.ನರಸಿಂಗರಾವ್ ಅವರ ಕುಟುಂಬದವರು ಪಕ್ಷದ ನಂಟು ಉಳಿಸಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಹತ್ತಿರದ ಸಂಬಂಧಿ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಕದರನಹಳ್ಳಿ ಕೆ.ಜಿ.ಬಸಪ್ಪ ಅವರ ಕುಟುಂಬದವರು ಸಹ ಇವತ್ತು ಪಕ್ಷದಲ್ಲಿಲ್ಲ.

ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಹಾಲಿ ಶಾಸಕರು ಚಾಣಾಕ್ಷತನದಿಂದ ತಮ್ಮದೇ ಆದ ಪಡೆಯೊಂದನ್ನು ಕಟ್ಟಿಕೊಂಡು ಮೂಲ ಕಾಂಗ್ರೆಸಿಗರನ್ನು ಮೂಲೆ ಮಾಡಿದರು ಎನ್ನುವ ಆರೋಪಗಳಂತೂ ಹೇರಳವಾಗಿವೆ. ಆದರೆ ಇವುಗಳನ್ನು ಶಾಸಕರ ಬೆಂಬಲಿಗರು ನಿರಾಕರಿಸುತ್ತಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಬೇಸರದಲ್ಲಿರುವ ನಾಯಕರು

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಸ್ಥಳೀಯ ಶಾಸಕರ ಆಪ್ತರಾಗಿದ್ದ ಬಹುತೇಕ ಮುಖಂಡರು ತಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗಲಿಲ್ಲ ಎಂದು ಬೇಸರದಲ್ಲಿದ್ದಾರೆ.

ಆಪ್ತರಲ್ಲಿ ಪ್ರಮುಖರಾದ ಎಸ್.ಎ. ಅಶ್ವತ್ಥನಾರಾಯಣಶೆಟ್ಟಿ ಮತ್ತು ಸಹೋದರ ಸೂರಣ್ಣ, ಹಂಪಸಂದ್ರದ ವೆಂಕಟೇಗೌಡ, ಗೌರಿಬಿದನೂರು ಪಟ್ಟಣದ ಡ್ರೈವರ್ ರಘು (ರಾಘವರಾವ್), ಅಬ್ಬಾಸ್, ಶರೀಫ್, ಬೀಡಿಬಾಷಾ, ಸ್ವಾತಂತ್ರ್ಯ ಹೋರಾಟಗಾರ್ತಿ ಗಂಗಸಂದ್ರ ಗೌರಮ್ಮ, ತರಿದಾಳು ಶ್ರೀನಿವಾಸಾಚಾರ್, ವೇದಲವೇಣಿ ಸಿದ್ದಪ್ಪ, ಬೊಮ್ಮಸಂದ್ರ ಗೋವಿಂದಪ್ಪ, ಕಂಬಾಲಹಳ್ಳಿ ಕೆ.ಎಲ್.ರಾಮಯ್ಯ, ಅಲ್ಲಂಪಲ್ಲಿ ನಾರಾಯಣಶೆಟ್ಟಿ, ಪುರಸಭೆಯ ಮಾಜಿ ಉಪಾಧ್ಯಕ್ಷ ಎಸ್.ಎ.ಮಜೀದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಾಟದಹೊಸಹಳ್ಳಿಯ ವಿ.ಎಂ.ಸಿ ನಾಯಕ್ ಅವರೆಲ್ಲ ದೂರವಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್‌ನ ಮುಖಂಡರೊಬ್ಬರು ತಿಳಿಸಿದರು.

**
ಪಕ್ಷದ ಏಳಿಗೆಗಾಗಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ದುಡಿದವರಿಗೆ ಈಗಿನ ಕಾಂಗ್ರೆಸ್ ಪಾಳೆಯದಲ್ಲಿ ಬೆಲೆ ನೀಡದೆ ಮೂಲೆಗುಂಪು ಮಾಡಿದ್ದಾರೆ 
– ಕೆ.ನಾಗಭೂಷಣರಾವ್, ಕಾಂಗ್ರೆಸ್ ಮುಖಂಡ

ಜಗನ್ನಾಥ್. ಎ.ಎಸ್. ಆರ್ಕುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT