ಬೆಂಗಳೂರು:ವಿಧಾನಸಭೆಯ ಕಲಾಪವನ್ನು ಎರಡು ದಿನ ನುಂಗಿಹಾಕಿದ ಆಡಿಯೊ ವಿಷಯದ ತನಿಖೆಗೆ ಎಸ್ಐಟಿ ರಚನೆ ಇಂದೂ ಆಗಲಿಲ್ಲ. ನಾಳೆ(ಬುಧವಾರ) ಸಭಾಧ್ಯಕ್ಷರ ಕೊಠಡಿಯಲ್ಲಿ ಮೈತ್ರಿ, ವಿಪಕ್ಷ ನಾಯಕರ ಸಭೆ ನಡೆಯಲಿದೆ.
ಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದ ಆಡಿಯೊ ಕುರಿತು ವಿಧಾನಸಭೆಯಲ್ಲಿ ಎರಡು ದಿನ ಪರ–ವಿರೋಧ ಚರ್ಚೆಗಳು ನಡೆದವು. ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ಸಭಾಧ್ಯಕ್ಷರು ನಿನ್ನೆ ಸೂಚಿಸಿದ್ದರು. ಅದಕ್ಕೆ ಸಿಎಂ ಆದೇಶ ನೀಡುವಂತೆ ಹೇಳಿದ್ದರು. ಇದಕ್ಕೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
* ಇದನ್ನೂ ಓದಿ:ರೆಬೆಲ್ ಶಾಸಕರ ಭವಿಷ್ಯ: ಮುಂದಿರುವ ಏಳು ಹಾದಿಗಳು
ಎರಡು ದಿನ ಮೌನವಾಗಿ ಎಲ್ಲವನ್ನೂ ಆಲಿಸಿದ್ದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಾತನಾಡಿ, ಮುಖ್ಯಮಂತ್ರಿ ನಕಲಿ ಆಡಿಯೊ ಬಿಡುಗಡೆ ಮಾಡಿ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ ಎಂದು ಆಪಾದಿಸಿದರು. ಜತೆಗೆ, ಸಭಾಧ್ಯಕ್ಷರು ಎಲ್ಲರನ್ನೂ ತಮ್ಮ ಕೊಠಡಿಯಲ್ಲಿ ಕರೆದು ಮಾತನಾಡಬಹುದಿತ್ತು. ಆಗ, ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಕರೆದು ಮಾತನಾಡಲಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಮಾತನಾಡಿ, ನಾನು ತಪ್ಪು ಮಾಡಿದ್ದೇನೆ ಎಂದು ಆಪಾದಿಸುತ್ತಿದ್ದಾರೆ. ನನ್ನನ್ನೂ ಸೇರಿ ತನಿಖೆಯಾಗಲಿ. ತಪ್ಪೆಸಗಿದ್ದರೆ ಶಿಕ್ಷೆಗೆ ಸಿದ್ಧ ಎಂದು ಹೇಳಿ, ಸಭಾಧ್ಯಕ್ಷರು ನಿನ್ನೆ ಸೂಚನೆ ನೀಡಿರುವಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಬೇಕು ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಭಾಧ್ಯಕ್ಷ ರಮೇಶ್ ಕುಮಾರ್, ‘ನಾಳೆ ಬಳಿಗ್ಗೆ 10.30ಕ್ಕೆ ನಮ್ಮ ಕೊಠಡಿಯಲ್ಲಿ ಕೂತು ಮಾತನಾಡೋಣ. ಅದರಿಂದ ಪರಿಹಾರ ಕಂಡುಕೊಳ್ಳುವುದಾದರೆ ಆಗಲಿ. ವಿಪಕ್ಷಗಳ ಮಾತಿಗೆ ಬೆಲೆ ಕೊಡಲಿಲ್ಲ ಎಂಬ ಅಪಾದನೆ ನಮ್ಮ ಮೇಲೆ ಬರುವುದು ಬೇಡ. ನಿಮಗೆ ಯಾರೆಲ್ಲಾ ಬೇಕು ಎಂದು ಆಯ್ಕೆ ಮಾಡಿಕೊಂಡು ನಮ್ಮ ಕೊಠಡಿಗೆ ಕರೆತನ್ನಿ ಎಂದು ಆಡಳಿತ ಪಕ್ಷದ ನಾಯಕರು ಮತ್ತು ವಿಪಕ್ಷ ನಾಯಕರಿಗೆ ಸೂಚಿಸಿದರು.
ಸದನದ ಕಲಾಪವನ್ನು ನಾಳೆ ಬಳಿಗ್ಗೆ 11.30ಕ್ಕೆ ಆರಂಭಿಸಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು.
ಇದರಿಂದಾಗಿ ಎರಡು ದಿನ ಕಲಾಪ ನುಂಗಿದ ಆಡಿಯೊ ವಿಷಯದ ತನಿಖೆಗೆ ಎಸ್ಐಟಿ ರಚನೆ ಇಂದೂ ಆಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.