ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಯುಸಿ: ಮೌಲ್ಯಮಾಪನಕ್ಕೆ ಗೈರಾದರೆ ಜೈಲು’

ಮನೋಬಲ ಕುಗ್ಗಿಸುವ ಪ್ರಯತ್ನವಿದು : ಉಪನ್ಯಾಸಕರ ಸಂಘ
Last Updated 19 ಮಾರ್ಚ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿ.ಯು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗೈರಾದರೆ ಒಂದು ವರ್ಷ ಜೈಲು ಅಥವಾ ₹ 10 ಸಾವಿರ ದಂಡ ವಿಧಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ಉಪನ್ಯಾಸಕರಿಗೆ ಮಂಗಳವಾರ ಖಡಕ್‌ ಎಚ್ಚರಿಕೆ ನೀಡಿದೆ.

‘ಮೌಲ್ಯಮಾಪನ ಕೆಲಸಕ್ಕೆ ಉಪನ್ಯಾಸಕರು ಗೈರು ಹಾಜರಾದರೆ, ಪ್ರಾಂಶುಪಾಲರನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದೆ.

‘ಶಿಕ್ಷಣ ಕಾಯ್ದೆಯ 137ನೇ ಸೆಕ್ಷನ್‌ ಪ್ರಕಾರ ಪರೀಕ್ಷಾ ಕಾರ್ಯ ನಿರಾಕರಣೆ, ಗೈರುಹಾಜರಿಯು ಗಮನಾರ್ಹ ಹಾಗೂ ಜಾಮೀನು ರಹಿತ ಅಪರಾಧವಾಗಿರುತ್ತದೆ. ಪರೀಕ್ಷಾ ಕಾರ್ಯ ಅಪೂರ್ಣಗೊಳಿಸಲು ಪ್ರಚೋದನೆ ನೀಡುವವರ ಮೇಲೆಯೂ ಸೆಕ್ಷನ್‌ 122ರಡಿ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಲಾಖೆ ಈಗಾಗಲೇ 18,005 ಸಹಾಯಕ ಮೌಲ್ಯಮಾಪಕರು ಹಾಗೂ 3,114 ಉಪಮುಖ್ಯ ಮೌಲ್ಯಮಾಪಕರನ್ನು ಗುರುತಿಸಿದೆ.

ಕಾನೂನು ಸುವ್ಯವಸ್ಥೆ ಹಾಗೂ ಶಿಕ್ಷಣ ಕಾಯ್ದೆ ಪ್ರಕಾರ ಗೈರಾದರಷ್ಟೇ ಅಲ್ಲ, ಮೌಲ್ಯಮಾಪನ ಕಾರ್ಯಕ್ಕೆ ಅಡ್ಡಿಪಡಿಸಿದರೂ ಈ ಶಿಕ್ಷೆ ಮತ್ತು ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಹೀಗಾಗಿ, ಮೌಲ್ಯಮಾಪನ ನೇಮಕಾತಿ ಆದೇಶಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರ ಗಮನಕ್ಕೆ ತರುವಂತೆ ತಿಳಿಸಲಾಗಿದೆ.

‘ಮನೋಬಲ ಕುಗ್ಗಿಸುವ ಮಾರ್ಗವಿದು’: ‘ಉಪನ್ಯಾಸಕ ಸಮೂಹದ ಮನೋಬಲವನ್ನು ಕುಗ್ಗಿಸಲು ಈ ರೀತಿಯ ಸುತ್ತೋಲೆಗಳನ್ನು ಇಲಾಖೆ ಹೊರಡಿಸುತ್ತಿದೆ’ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಸುತ್ತೋಲೆಗಳೆಲ್ಲ ನಮಗೆ ಮರಣದಂಡನೆಯ ಆದೇಶಗಳಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮಾರ್ಚ್‌ 21ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸುವುದು ಖಚಿತ’ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಬೇಸಿಗೆ ರಜೆ ಅವಧಿ ಘೋಷಣೆ: ಮಾರ್ಚ್‌ 20ರಿಂದ ಮೇ 19ರ ವರೆಗೆ ಬೇಸಿಗೆ ರಜೆಯ ಅವಧಿ ಇರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಘೋಷಿಸಿದೆ. ಪ್ರಥಮ ಪಿ.ಯು. ಪೂರಕ ಪರೀಕ್ಷೆಯನ್ನು ಏಪ್ರಿಲ್‌ 25ರಿಂದ ಮೇ 10ರ ವರೆಗೆ ನಡೆಸಲು ಇಲಾಖೆ ನಿರ್ಧರಿಸಿದೆ.

‘ಮನೋಬಲ ಕುಗ್ಗಿಸುವ ಮಾರ್ಗವಿದು’

‘ಉಪನ್ಯಾಸಕ ಸಮೂಹದ ಮನೋಬಲವನ್ನು ಕುಗ್ಗಿಸಲು ಈ ರೀತಿಯ ಸುತ್ತೋಲೆಗಳನ್ನು ಇಲಾಖೆ ಹೊರಡಿಸುತ್ತಿದೆ’ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಸುತ್ತೋಲೆಗಳೆಲ್ಲ ನಮಗೆ ಮರಣದಂಡನೆಯ ಆದೇಶಗಳಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮಾರ್ಚ್‌ 21ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸುವುದು ಖಚಿತ’ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಮೌಲ್ಯಮಾಪನದಿಂದ ಹೊರಗಿಟ್ಟಿದ್ದಕ್ಕೆ ಅಸಮಾಧಾನ

‘ದ್ವಿತೀಯ ಪಿ.ಯು. ಪರೀಕ್ಷೆಯ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನದಿಂದ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಹೊರಗಿಡಲಾಗಿದೆ’ ಎಂದು ಹಲವಾರು ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ನೂರಾರು ಉಪನ್ಯಾಸಕರು ಸುಮಾರು 25ಕ್ಕೂ ಹೆಚ್ಚು ವರ್ಷಗಳ ಕಾಲ ಬೋಧನಾ ಅನುಭವ ಹೊಂದಿದ್ದಾರೆ. ಅವರಿಗೆ ವಿಷಯಜ್ಞಾನ ಹೆಚ್ಚಿದೆ. ಅಂತವರನ್ನು ಮೌಲ್ಯಮಾಪನ ಕಾರ್ಯದಿಂದ ಹೊರಗೆ ಇಟ್ಟಿರುವುದು ಸರಿಯಲ್ಲ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದರೆ ಪರಿಣಾಮಕಾರಿ ಬೋಧನೆ ಕುರಿತು ಒಂದಿಷ್ಟು ತಿಳಿಯುತ್ತದೆ’ ಎಂದು ಕೆಲವು ಉಪನ್ಯಾಸಕರು ‘ಪ್ರಜಾವಾಣಿ’ ಕಚೇರಿಗೆ ಫೋನ್‌ ಮಾಡಿ ತಿಳಿಸಿದರು.

‘ಪರೀಕ್ಷೆ ನಡೆಯುವ ವೇಳೆ ನಮ್ಮನ್ನು ವಿಶೇಷ ಜಾಗೃತ ದಳ, ಸಂಚಾರ ದಳದ ಸಿಬ್ಬಂದಿಯಾಗಿ ನಿಯೋಜಿಸಿಕೊಂಡು ಊರೂರು ಅಲೆಸುತ್ತಾರೆ. ಆದರೆ, ಒಂದೆಡೆ ಕೂತು ಮಾಡಬೇಕಾದ ಮೌಲ್ಯಮಾಪನ ಕೆಲಸಕ್ಕೆ ಕರೆಯುವುದಿಲ್ಲ’ ಎಂದು ಅನುದಾನಿತ ಕಾಲೇಜಿನ ಉಪನ್ಯಾಸಕರೊಬ್ಬರು ತೀವ್ರ ಅಸಮಾಧಾನ ಹೊರಹಾಕಿದರು.

ಬೇಸಿಗೆ ರಜೆ ಅವಧಿ ಘೋಷಣೆ

ಮಾರ್ಚ್‌ 20ರಿಂದ ಮೇ 19ರ ವರೆಗೆ ಬೇಸಿಗೆ ರಜೆಯ ಅವಧಿ ಇರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಘೋಷಿಸಿದೆ.

ಪ್ರಥಮ ಪಿ.ಯು. ಪೂರಕ ಪರೀಕ್ಷೆಯನ್ನು ಏಪ್ರಿಲ್‌ 25ರಿಂದ ಮೇ 10ರ ವರೆಗೆ ನಡೆಸಲು ಇಲಾಖೆ ನಿರ್ಧರಿಸಿದೆ.

ಉಪನ್ಯಾಸಕರ ಬೇಡಿಕೆಗಳು

* 1971 ರಿಂದ ಇದ್ದಂತೆ ಪ್ರತಿ ಶೈಕ್ಷಣಿಕ ವರ್ಷವೂ ಏಪ್ರಿಲ್‌ ಮತ್ತು ಮೇ ತಿಂಗಳುಗಳ ಬೇಸಿಗೆ ರಜೆಯ ಸೌಲಭ್ಯವನ್ನು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ನೀಡಬೇಕು.

* ಮೇ ಮೊದಲ ವಾರದಿಂದಲೇ ಪಿಯು ತರಗತಿ ಆರಂಭಿಸುವುದಾದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ತಕ್ಷಣವೇ ರಜೆ ರಹಿತ ಎಂದು ಆದೇಶ ಹೊರಡಿಸಬೇಕು.

* ಪ್ರತಿ ವರ್ಷ ಉಪನ್ಯಾಸಕರಿಗೆ 30 ಗಳಿಕೆ ರಜೆ, 20 ಅರ್ಧ ವೇತನ ರಜೆ ಹಾಗೂ ತಿಂಗಳಿನ ಎರಡನೇ ಶನಿವಾರದ ರಜೆ ಮತ್ತು ಇತರ ರಜಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

* 2019 ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಐಚ್ಛಿಕವಾದುದು ಎಂದು ಆದೇಶ ಹೊರಡಿಸಬೇಕು.

* ಮೌಲ್ಯಮಾಪನಕ್ಕೆ ಗೈರಾಗುವುದರಿಂದ ಎದುರಾಗುವ ಸಮಸ್ಯೆಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯೇ ಹೊಣೆಗಾರಿಕೆ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT