ಚಿಕ್ಕಮಗಳೂರು: ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಸ್ಥೆ ವಹಿಸಿದ್ದರು.
ಸ್ವಾಮೀಜಿ ಅವರಿಗೆ ಕಾಫಿನಾಡಿನೊಂದಿಗೆ ಅವಿನಾಭಾವ ನಂಟು ಇತ್ತು.
ಗ್ರಾಮೋತ್ಥಾನ ಪರಿಕಲ್ಪನೆಯಡಿ ಜಿಲ್ಲೆಯ ಕೊಪ್ಪ ಭಾಗದ ಮೆಣಸಿನಹಾಡ್ಯ, ಕಳಸ ಭಾಗದ ಕೆಂಚನಕೆರೆ, ಕಾನುಮೇಳ, ದೇವರಗುಂಡಿ ಗ್ರಾಮಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಮುತುವರ್ಜಿ ವಹಿಸಿದ್ದರು. ಗಿರಿಜನರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನವನ್ನೂ ಕಲ್ಪಿಸಿದ್ದರು.
ಮಲೆನಾಡು ಭಾಗದ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಸ್ವಾಮೀಜಿ ಹೆಜ್ಜೆ ಹಾಕಿದ್ದರು. ಗ್ರಾಮಗಳ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದರು. ಗಿರಿಜನರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಜೀವನೋಪಾಯಕ್ಕೆ ಪರಿಕರಗಳನ್ನು ನೀಡಿದ್ದರು.