ಸೇಡಂ (ಕಲಬುರ್ಗಿ ಜಿಲ್ಲೆ):ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಬಳಿ ಶುಕ್ರವಾರ ಕಾಗಿಣಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಎಂಟು ಜನರನ್ನು ಅದೇ ಗ್ರಾಮದ ಮೀನುಗಾರ ಶರಣು ರಕ್ಷಿಸಿದ್ದಾರೆ.
ಮರಳು ತೆಗೆಯಲು ಇವರು ಬೆಳಿಗ್ಗೆ ನದಿಗೆ ಇಳಿದಿದ್ದರು. ಗುರುವಾರ ರಾತ್ರಿ ನದಿ ಪಾತ್ರದಲ್ಲಿ ಧಾರಾಕಾರ ಮಳೆ ಯಾಗಿದ್ದರಿಂದ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಯಿತು. ಆಗ ಅವರೆಲ್ಲರೂ ಹೊರಬರಲಾಗದೇ ನದಿ ಮಧ್ಯದಲ್ಲಿ ಇದ್ದ ಪೊದೆಗಳ ಆಸರೆ ಪಡೆದರು.
ಅವರಲ್ಲಿ ಒಬ್ಬರು ಮೊಬೈಲ್ನಿಂದ ಸ್ನೇಹಿತರಿಗೆ ಕರೆ ಮಾಡಿದರು. ಗ್ರಾಮದ ಜನ ಪೊಲೀಸ್ ಕಂಟ್ರೋಲ್ ರೂಂ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸೇಡಂನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದರು.
ಸಿಬ್ಬಂದಿ ಮಾರ್ಗದರ್ಶನದಂತೆ ದೋಣಿ ಮೂಲಕ ನದಿಗೆ ಇಳಿದ ಯುವಕ ಶರಣು, ಒಬ್ಬೊಬ್ಬರಾಗಿ ಎಲ್ಲರನ್ನೂ ದಡ ಸೇರಿಸಿದರು.
‘ಅಂದಾಜು ಒಂದೂವರೆ ತಾಸು ಪ್ರವಾಹದಲ್ಲೇ ಕಳೆದವು. ಇದು ನಮಗೆ ಪುನರ್ಜನ್ಮದ ಅನುಭವ’ ಎಂದು ದಡ ಸೇರಿದಶ್ರೀಮಂತ ರಾಯಪ್ಪ ಹೇಳಿದರು. ಇದಕ್ಕೆ ಸಿಡಿಲೆಪ್ಪ ರಾಯಪ್ಪ, ಅಖಿಲೇಶ ಸತೀಶ, ಅರುಣ ಬೀರಪ್ಪ ಪೂಜಾರಿ, ರಾಜಪ್ಪ ಬಸವರಾಜ, ಸಂತೋಷ ರಾಜಪ್ಪ, ಚಂದ್ರಪ್ಪ ರಾಯಪ್ಪ, ಶಂಕ್ರೆಪ್ಪ ನಾಗಪ್ಪ ಧ್ವನಿಗೂಡಿಸಿದರು.
ಆಪದ್ಬಾಂಧವ: ಎಂಟು ಜನರ ಪ್ರಾಣ ರಕ್ಷಿಸಿದ ಶರಣು ಹಣಮಂತ ಅವರಿಗೆ ಈಗ 20ರ ಪ್ರಾಯ. ಹತ್ತು ವರ್ಷಗಳಿಂದಲೂ ಪಾಲಕರೊಂದಿಗೆ ಮೀನುಗಾರಿಕೆ ಮಾಡುತ್ತಿದ್ದಾರೆ.
‘ಎಂಟು ಮಂದಿಯನ್ನು ನದಿಯಿಂದ ಹೊರಗೆ ಕರೆದುಕೊಂಡು ಬಂದೆ. ನಮ್ಮ ಅಣ್ಣ, ಮಾವ ಕೂಡ ನದಿಗೆ ಇಳಿದು ಸಹಾಯ ಮಾಡಿದರು. ಊರವರು ₹1 ಸಾವಿರ ಬಹುಮಾನ ಕೊಟ್ಟರು’ ಎಂದು ಶರಣು ಹೆಮ್ಮೆಪಟ್ಟರು.