ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆನ್ಲೈನ್ನಲ್ಲಿ ಮೂಲಕ ಪ್ರಶ್ನೆಪತ್ರಿಕೆ ರವಾನಿಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ. 2018ರ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಸರ್ಕಾರಿ ಕಾಲೇಜೊಂದರಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಅದು ಅಂತಿಮ ಪರೀಕ್ಷೆಯಲ್ಲಿ ಜಾರಿಗೆ ಬರಲಿಲ್ಲ.
‘ನಿರಂತರ ವಿದ್ಯುತ್ ಪೂರೈಕೆ, ಶೇ 100ರಷ್ಟು ವಿದ್ಯುತ್ ಬ್ಯಾಕ್ಅಪ್, ಇಂಟರ್ನೆಟ್, ಫೊಟೊಕಾಪಿ ಯಂತ್ರ ಸಹಿತ ಸೌಲಭ್ಯಗಳು ಬೇಕು. ಈ ವರ್ಷ ಅದನ್ನು ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ’ ಎಂದು ಹೇಳಿದ ಅಧಿಕಾರಿಗಳು ಆನ್ಲೈನ್ ವ್ಯವಸ್ಥೆ ಸದ್ಯಕ್ಕೆ ಅಸಾಧ್ಯ ಎಂದಿದ್ದಾರೆ.