ಕಲಬುರ್ಗಿ: ನಗರದ ಜನನಿಬಿಡ ಪ್ರದೇಶದಲ್ಲಿನ ಸ್ಮಶಾನದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಅಲ್ಲಿನ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಿಜಯನಗರದ ಸ್ಮಶಾನದಲ್ಲಿ ಶನಿವಾರ ರಾತ್ರಿ ಆರೋಗ್ಯ ಇಲಾಖೆ ಸಿಬ್ಬಂದಿ ಈ ಅಂತ್ಯಕ್ರಿಯೆ ನಡೆಸಿದರು. ಮೃತ ವ್ಯಕ್ತಿಯ ಕುಟುಂಬದವರೂ ಈ ಸಂದರ್ಭದಲ್ಲಿ ಇದ್ದರು. ಈ ಸ್ಮಶಾನದಲ್ಲಿ ಸುತ್ತಮುತ್ತ ಅನೇಕ ಮನೆಗಳಿವೆ. ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಆದರೂ ಇಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಹೀಗಾಗಿ ಕೊರೊನಾ ಹರಡುವ ಆತಂಕ ಹೆಚ್ಚಾಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಶವ ಹೂಳುವುದಕ್ಕೂ ಮುನ್ನ ಸ್ಮಶಾನದಲ್ಲಿ ಹತ್ತಿರ ಬಂದ ಜನ, ನಗರದಿಂದ ಹೊರಗೆ ಅಂತ್ಯಕ್ರಿಯೆ ಮಾಡುವಂತೆ ಆಗ್ರಹಿಸಿದರು. ಆದರೂ ಸಿಬ್ಬಂದಿ ಬೇಜವಾಬ್ದಾರಿಯಿಂದ ನಿಗದಿತ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡರು. ಅಂತ್ಯಕ್ರಿಯೆಯ ವಿಡಿಯೊ ಹಾಗೂ ಫೋಟೊಗಳು ಭಾನುವಾರ ಮಧ್ಯಾಹ್ನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.