ಬೆಂಗಳೂರು: ‘ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಪಟ್ಟಿಯಲ್ಲಿ ಇಲ್ಲದ ಸಣ್ಣಪುಟ್ಟ ವರ್ಗಗಳಿಗೆ ಒಂದೆರಡು ದಿನಗಳಲ್ಲಿ ನೆರವು ಘೋಷಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ಭಾನುವಾರ ವಿಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ಭರವಸೆ ನೀಡಿದರು.
ಸಂಕಷ್ಟದಲ್ಲಿರುವ ಸಮುದಾಯಗಳಿಗೆ ವಿಶೇಷ ನೆರವು ಘೋಷಿಸಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಮುಖಂಡರು, ಬಿಟ್ಟು ಹೋಗಿರುವ ಕೆಲವು ಶ್ರಮಿಕ ವರ್ಗಗಳಿಗೂ ಆದಷ್ಟು ಬೇಗ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದರು.
‘ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮನೆ ಮನೆಗಳಿಗೆ ತಲುಪುವಂತೆ ಮಾಡುವ ಜವಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಅಭಿಪ್ರಾಯಗಳನ್ನು ಆದ್ಯತೆ ಮೇರೆಗೆ ಪರಿಗಣಿಸುತ್ತೇನೆ. ಜಿಲ್ಲಾವಾರು ಕೋವಿಡ್ ನಿಯಂತ್ರಣದಲ್ಲಿ ತೊಂದರೆಗಳಾದರೆ ತಕ್ಷಣ ತಿಳಿಸಿ’ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ತಿಳಿಸಿದರು.