ಬೆಂಗಳೂರು: ಭಾರತದ ಪ್ರಾಚೀನ ಶಿಕ್ಷಣ ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಗೋಕರ್ಣದ ಅಶೋಕೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆಯ ಉದ್ದೇಶದಿಂದ ರಾಮಾಯಣ ಅನುಸಂಧಾನದ ಕಾರ್ಯ ಆಗುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಆರು ತಿಂಗಳ ಧಾರಾ ರಾಮಾಯಣ ಪ್ರವಚನವನ್ನು ಗಿರಿನಗರದ ರಾಮಾಶ್ರಮದಲ್ಲಿ ಗುರುವಾರ ಆರಂಭಿಸಲಾಯಿತು.
‘ಧಾರಾ ರಾಮಾಯಣದ ಮೂಲಕ ಇಡೀ ಸಮಾಜದಲ್ಲಿ ಧರ್ಮಜಾಗೃತಿ ಹಾಗೂ ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ನಾಂದಿ ಹಾಡುವ ವಿಶ್ವವಿದ್ಯಾಪೀಠವೊಂದರ ಸ್ಥಾಪನೆಯ ಅಗತ್ಯ- ಅನಿವಾರ್ಯತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸಂಕಲ್ಪ ನಮ್ಮದು’ ಎಂದು ಹೇಳಿದರು.
‘ನಮ್ಮೊಳಗೇ ರಾಮನಿದ್ದಾನೆ; ನಮ್ಮ ಆತ್ಮವೇ ರಾಮ; ಚಿತ್ತಶುದ್ಧಿಯೊಂದಿಗೆ ಆತನನ್ನು ಉದ್ದೀಪಿಸುವುದೇ ರಾಮಾಯಣ ಅನುಸಂಧಾನದ ಉದ್ದೇಶ’ ಎಂದರು.
ಮಠದ ಪ್ರಮುಖರಾದ ರಾಮಕೃಷ್ಣ ಭಟ್ ಕೂಟೇಲು, ತಿಮ್ಮಪ್ಪ ಮಡಿಯಾಳ್, ಕೆ.ಜಿ.ಭಟ್, ಧಾರಾ ರಾಮಾಯಣ ಕ್ರಿಯಾಸಮಿತಿ ಅಧ್ಯಕ್ಷೆ ಡಾ.ಶಾರದಾ ಜಯಗೋವಿಂದ್, ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮ ಸಂಪ ಇದ್ದರು. ‘ಬಾಳದಾರಿಗೆ ರಾಮದೀವಿಗೆ’ ಎಂಬ ಹೆಸರಿನ ಈ ಪ್ರವಚನಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ನಡೆಯಲಿದೆ.