ಬೆಂಗಳೂರು: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲ್ವೆ ಇಲಾಖೆ ಕಲ್ಪಿಸಿದ್ದ ವಿಶೇಷ ಶ್ರಮಿಕ ರೈಲಿನಲ್ಲಿ ಈವರೆಗೆ 1.75 ಲಕ್ಷ ಜನ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಾರೆ.
ಮೇ 5ರಿಂದ ವಿಶೇಷ ಶ್ರಮಿಕ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಆರಂಭಿಸಿತು. ಬೆಂಗಳೂರಿನ ಚಿಕ್ಕಬಾಣಾವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಮಾಲೂರು, ಹುಬ್ಬಳ್ಳಿ, ಕಬಕ ಪುತ್ತೂರು, ಮೈಸೂರಿನ ಅಶೋಕಪುರ, ಹಾಸನ, ಬಳ್ಳಾರಿ ರೈಲು ನಿಲ್ದಾಣಗಳಿಂದ 122 ರೈಲುಗಳು ಕಾರ್ಮಿಕರನ್ನು ಹೊತ್ತು ತೆರಳಿವೆ.
ಈ ರೈಲುಗಳಲ್ಲಿ ಕಾರ್ಮಿಕರು ಒಡಿಶಾ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು–ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ, ಉತ್ತರಖಂಡ, ಮಣಿಪುರ ರಾಜ್ಯಗಳಿಗೆ ವಾಪಸ್ ಹೋಗಿದ್ದಾರೆ.
ಮೊದಲ ದಿನ 4 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದವು. ಸದ್ಯ ದಿನಕ್ಕೆ 10ರಿಂದ 13 ರೈಲುಗಳು ವಿವಿಧ ನಿಲ್ದಾಣಗಳಿಂದ ಹೊರಡುತ್ತಿವೆ. ಬಹುತೇಕ ರೈಲುಗಳು ಬೆಂಗಳೂರಿನಿಂದಲೇ ತೆರಳಿದ್ದು, ವಲಸೆ ಕಾರ್ಮಿಕರು ಸಿಲಿಕಾನ್ ಸಿಟಿಯನ್ನು ತೊರೆದಿದ್ದಾರೆ.