ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.
ಪ್ರಭಾತ್ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ವಿದ್ಯಾರ್ಥಿಗಳ ‘ನೃತ್ಯ ಕಾವ್ಯ ಕಥಾ’ ಪ್ರದರ್ಶನವು ಗಮನ ಸೆಳೆಯಿತು.ಗಾಯಕಿ ಅನನ್ಯಾ ಭಟ್ ಮತ್ತು ತಂಡದವರು ದೇಶಭಕ್ತಿ ಗೀತೆಗಳನ್ನು ಸಾದರಪಡಿಸಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದರು.
ಗಂಗಾಧರಯ್ಯ ತಂಡದ ವೀರಗಾಸೆ, ವಿನೋದ ತಂಡದ ಮಹಿಳಾ ಡೊಳ್ಳುಕುಣಿತ, ಸರಿತಾ ತಂಡದ ಪಟ ಕುಣಿತ, ಮೆಹಬೂಬ ಸುಭಾನಿ ತಂಡದ ಡೋಲು ಕುಣಿತ, ಕಾರ್ತಿಕ್ ತಂಡದ ಪೂಜಾ ಕುಣಿತ, ಡಿ.ಪ್ರಮೋದ ತಂಡದ ಕಂಸಾಳೆ, ಕುಟ್ಟಪ್ಪ ತಂಡದ ಸುಗ್ಗಿ ಕುಣಿತ, ಮಹೇಂದ್ರ ತಂಡದ ಪೂಜಾ ಕುಣಿತ ಹಾಗೂ ಸತೀಶ್ ತಂಡದ ಡಮಾಮಿ ನೃತ್ಯಗಳು ಗಣರಾಜ್ಯೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.